ಕನ್ನಡ ತಂತ್ರಜ್ಞಾನದ ಭಾಷೆಯಾಗಬೇಕು : ಚಿದಾನಂದಮೂರ್ತಿ
ಚಿಕ್ಕಮಗಳೂರು : ಶ್ರೀಮಂತವಾದ ಕನ್ನಡ ಭಾಷೆ ವಿಜ್ಞಾನ ಹಾಗೂ ತಂತ್ರಜ್ಞಾನದ ಭಾಷೆಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಗಂಭೀರವಾಗಿ ಚಿಂತಿಸಬೇಕು ಎಂದು ಕನ್ನಡ ಶಕ್ತಿಕೇಂದ್ರದ ಕಾರ್ಯಾಧ್ಯಕ್ಷ ಡಾ. ಎಂ. ಚಿದಾನಂದಮೂರ್ತಿ ಹೇಳಿದ್ದಾರೆ.
ಇಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಚಿ.ಮೂ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಕನ್ನಡ ಭಾಷೆ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದೆ. ಕಂಪ್ಯೂಟರ್ ಅನಿವಾರ್ಯ ಹಾಗೂ ಅತ್ಯಗತ್ಯವಾಗಿರುವ ಇಂದಿನ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ವಿಜ್ಞಾನ ಹಾಗೂ ತಂತ್ರಜ್ಞಾನ ಭಾಷೆಯಾಗಿ ಹೊರಹೊಮ್ಮಿದಾಗ ಮಾತ್ರ ಅದರ ಬೆಳವಣಿಗೆ ಸಾಧ್ಯ ಎಂದರು.
ಕೃತಿ ಬಿಡುಗಡೆ : ನಾಗರಿಕತೆಯಲ್ಲಿ ಭಾಷೆಯ ಅಧ್ಯಯನ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಸಂಪರ್ಕ ಸಂವಹನದಲ್ಲಿ ಅಂತರ್ಜಾಲ ಅತ್ಯಂತ ಮಹತ್ವದ್ದಾಗಿದೆ, ಈ ಆಧುನಿಕ ಆವಿಷ್ಕಾರಗಳಿಗೆ ತಕ್ಕಂತೆ ಕನ್ನಡ ಭಾಷೆಯ ಬೆಳವಣಿಗೆಯೂ ಆಗಬೇಕು. ತಂತ್ರಜ್ಞಾನದ ಭಾಷೆಯಾಗಿ ಏಕರೂಪದಿಂದ ಕನ್ನಡ ಹೊರಹೊಮ್ಮಬೇಕು ಎಂದು ಅವರು ಹೇಳಿದರು.
ಡಾ. ಎಂ.ಪಿ. ಮಂಜಪ್ಪ ಶೆಟ್ಟಿ ಮಸಗಲಿ ಅವರ ಮಲೆನಾಡು ಜನಪದ ಲೋಕ ಕೃತಿ ಬಿಡುಗಡೆ ಮಾಡಿದ ಅವರು, ಜಾನಪದ ಎಂದರೆ, ಹಾಡು, ಕಥೆ, ಭಾಷೆ ಅಷ್ಟೇ ಅಲ್ಲ. ಅದರ ಹಿಂದೆ ಒಂದು ಬದುಕಿನ ರೀತಿ ಇದೆ. ನೀತಿಯಾಂದನ್ನು ಜೀವಂತವಾಗಿಡಲು ಜಾನಪದ ಒಂದು ಸಾಧನವಾಗಿದೆ ಎಂದರು.
ಲಯನ್ಸ್ ಸಂಸ್ಥೆ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಚಿದಾನಂದ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕೆ.ಎಚ್. ಗೋಪಾಲಕೃಷ್ಣ ಗೌಡ, ಜಿಲ್ಲಾ ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣೇಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಹಾಸನ ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...