ಜೋಗದ ಸಿರಿ ಬೆಳಕಿನ ನಿತ್ಯೋತ್ಸವಕ್ಕೆ ಸಿ.ಡಿ.ಯ ಮೆರುಗು
ಬೆಂಗಳೂರು : ಕನ್ನಡದ ಖ್ಯಾತ ಕವಿ ಪ್ರೊ. ಕೆ.ಎಸ್. ನಿಸ್ಸಾರ್ ಅಹ್ಮದ್ ಅವರ ಜನಪ್ರಿಯ ನಿತ್ಯೋತ್ಸವ ಭಾವಗೀತೆಗಳ ಧ್ವನಿಸುರುಳಿ ಈಗ ಸಿ.ಡಿ. ರೂಪ ಪಡೆದಿದೆ. ಆಧುನಿಕ ರೂಪ ಪಡೆದ ಈ ಸಿ.ಡಿಗಳನ್ನು ಡಾ. ರಾಜ್ಕುಮಾರ್ ತಮ್ಮ ಮನೆಯಲ್ಲಿ ಶನಿವಾರ ಬಿಡುಗಡೆ ಮಾಡಿದರು.
ಆಪ್ತರು ಹಾಗೂ ಆಯ್ದ ಆಹ್ವಾನಿತರ ಸಮ್ಮುಖದಲ್ಲಿ ಡಾ. ರಾಜ್ ನಿತ್ಯೋತ್ಸವದ ಕಾಂಪ್ಯಾಕ್ಟ್ ಡಿಸ್ಕ್ ಅನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಪಾರ್ವತಮ್ಮ ರಾಜ್ಕುಮಾರ್, ಕವಿ ನಿಸಾರ್ ಅಹ್ಮದ್ ಹಾಗೂ ನಿತ್ಯೋತ್ಸವವನ್ನು ಸಿ.ಡಿ.ಯಲ್ಲಿ ಹೊರತಂದ ಕಲ್ಕೂಲ್ ಸಂಸ್ಥೆಯ ಪ್ರಭಾಕರ್ ಹಾಜರಿದ್ದರು.
ಕನ್ನಡದ ವರನಟನಿಂದ ಸಿ.ಡಿ. ಬಿಡುಗಡೆ ಮಾಡಿಸಿದ್ದಕ್ಕೆ ಕವಿ ನಿಸಾರ್ ಅಹ್ಮದ್ ಕೃತಜ್ಞತೆ ಸಲ್ಲಿಸಿದರೆ, ಇಂತಹ ಒಂದು ಉತ್ತಮ ಧ್ವನಿಸುರುಳಿಯ ಸಿ.ಡಿ. ಬಿಡುಗಡೆ ಮಾಡಲು ತಮಗೆ ಅತೀವ ಆನಂದವಾಗಿದೆ ಎಂದು ರಾಜ್ ನುಡಿದರು. ಪಾರ್ವತಮ್ಮ ರಾಜ್ಕುಮಾರ್ ಶುಭ ಹಾರೈಸಿದರು.
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜನರಿಂದ ಅಪಾರ ಬೇಡಿಕೆ ಇರುವ ನಿತ್ಯೋತ್ಸವವನ್ನು ಸಿ.ಡಿ. ರೂಪದಲ್ಲಿ ತರಲಾಯಿತು ಎಂದು ಸಂಸ್ಥೆಯ ಕೆ. ಪ್ರಭಾಕರ್ ಹೇಳಿದರು.