ದ.ಕ. ಕಾಂಗ್ರೆಸ್ ಅಧ್ಯಕ್ಷ ಬ್ಲೇಸಿಯಸ್ ಆಯ್ಕೆಗೆಹೈಕಮಾಂಡ್ ಅಸ್ತು
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಬ್ಲೇಸಿಯಸ್ ಡಿಸೋಜಾ ಆಯ್ಕೆಯನ್ನು ಪಕ್ಷದ ಹೈ ಕಮಾಂಡ್ ಮಾನ್ಯ ಮಾಡುವುದರೊಂದಿಗೆ ಈ ಕುರಿತ ವಿವಾದ ಬಗೆಹರಿದಂತಾಗಿದೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು . ಅಧ್ಯಕ್ಷ ಸ್ಥಾನಕ್ಕೆ ಎ.ಸಿ. ಭಂಡಾರಿ ಮತ್ತು ಬ್ಲೇಸಿಯಸ್ ಡಿಸೋಜಾ ಸ್ಪರ್ಧಿಸಿದ್ದು , ಡಿಸೋಜಾ ಅವರು ಬಹುಮತ ಪಡೆದಿದ್ದರು. ಆದರೆ ಎ.ಸಿ. ಭಂಡಾರಿ ಬಣ ಚುನಾವಣೆಯು ನ್ಯಾಯ ಸಮ್ಮತವಾಗಿಲ್ಲ ಎಂದು ಆಪಾದಿಸಿ ಪಕ್ಷದ ವರಿಷ್ಠ ಮಂಡಳಿಗೆ ದೂರು ನೀಡಿತ್ತು.
ಪ್ರಸ್ತುತ ಕಾಂಗ್ರೆಸ್ನ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಕಾರ್ಯದರ್ಶಿ ರಾಣೋಜ್ ಬಸು ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ವೀರಭಧ್ರಪ್ಪ, ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಮತ್ತಿತರ ಮುಖ್ಯಸ್ಥರಿಗೆ ಪತ್ರ ಬರೆದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬ್ಲೇಸಿಯಸ್ ಡಿಸೋಜಾರ ಅಯ್ಕೆಯನ್ನು ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರ ಅನುಮೋದಿಸಿದೆ ಎಂದು ಹೇಳಿದ್ದಾರೆ.
ಇದುವರೆಗೆ ಅಧ್ಯಕ್ಷ ಸ್ಥಾನದಲ್ಲಿದ್ದ ಎ. ಸಿ. ಭಂಡಾರಿ ಅವರು ಸ್ಥಾನ ತೆರವು ಮಾಡಲಿದ್ದು, ಏಪ್ರಿಲ್ 23ರಂದು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಸೇರಲಿದ್ದಾರೆ.
(ಮಂಗಳೂರು ಪ್ರತಿನಿಧಿಯಿಂದ)