ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಮಲೇರಿಯಾ : 1 ಸಾವು
ಬೆಂಗಳೂರು : ರಾಜ್ಯಾದ್ಯಂತ ಹಬ್ಬುತ್ತಿರುವ ಮಲೇರಿಯಾ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಲೇರಿಯಾ ಕಾಣಿಸಿಕೊಂಡಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಲೇರಿಯಾ ಹಾವಳಿ ಅತಿಯಾಗಿದೆ.
ತುಮಕೂರು ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷ ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಈ ಮಧ್ಯೆ ತುಮಕೂರಿನಲ್ಲಿ ಮಲೇರಿಯಾಕ್ಕೆ ಒಬ್ಬರು ಬಲಿಯಾಗಿದ್ದಾರೆ. ಮಲೇರಿಯಾದಿಂದ ವ್ಯಕ್ತಿ ಸತ್ತಿರುವುದನ್ನು ರಾಜ್ಯ ಆರೋಗ್ಯ ಸಚಿವ ಮಲಕರೆಡ್ಡಿ ಅವರೇ ಖಚಿತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಚಿತ್ರದುರ್ಗದ ಹೊಳಲ್ಕೆರೆ ಹಾಗೂ ಹೊಸದುರ್ಗದಲ್ಲಿಯೂ ಮಲೇರಿಯಾ ರೋಗದಿಂದ ನರಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಲೇರಿಯಾ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ ಎಂದೂ ಸಚಿವರು ಹೇಳಿದ್ದಾರೆ.
ಕಳೆದ ವರ್ಷ ಕೂಡ ಚಿಕ್ಕನಾಯಕನಹಳ್ಳಿಯ ಜನರು ಮಲೇರಿಯಾದಿಂದ ತತ್ತರಿಸಿದ್ದರು. ಈ ವರ್ಷವೂ ಇದೇ ಪ್ರದೇಶದಲ್ಲಿ ರೋಗ ಉಲ್ಬಣಿಸಿದೆ. ಕೇಂದ್ರ ಸರಕಾರ ರೋಗ ನಿಯಂತ್ರಣಕ್ಕೆ ನಿಯಮಿತವಾಗಿ ಔಷಧ ಹಾಗೂ ರಾಸಾಯನಿಕ ಕಳುಹಿಸದಿರುವುದೇ ರೋಗ ತೀವ್ರವಾಗಲು ಕಾರಣ ಎಂಬುದು ಆರೋಗ್ಯ ಇಲಾಖೆ ಹೇಳಿಕೆ. ಸಚಿವರು ಕೂಡ ಇದೇ ಮಾತುಗಳನ್ನೇ ಆಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಅನವಶ್ಯಕವಾಗಿ ಸೊಳ್ಳೆ ನಾಶಮಾಡುವ ಮಲೇರಿಯಾ ತಡೆ ರಾಸಾಯನಿಕ ಸಂಪಡಿಸುವುದಕ್ಕೆ ತಡೆ ಹಾಕಿದೆ. ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಮಾತ್ರ ರಾಸಾಯನಿಕ ಸಿಂಪಡಿಸಬಹುದು. ಆದರೆ, ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಕೇಂದ್ರದಿಂದ ಪೂರೈಕೆ ಆಗದೆ ಪರಿಸ್ಥಿತಿ ಹದಗೆಟ್ಟಿದೆ ಎಂದೂ ಅವರು ಹೇಳಿದ್ದಾರೆ.