ಉಚಿತ ದಂತ ಚಿಕಿತ್ಸಾ ಶಿಬಿರ ನಡೆಸಲು ದಂತವೈದ್ಯರಿಗೆ ಕರೆ
ಬೆಂಗಳೂರು : ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಕರ್ತವ್ಯ ನಿರ್ವಹಿಸುವಂತೆ ರಾಜ್ಯದ ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ದಂತ ವೈದ್ಯರಿಗೆ ಕರೆ ನೀಡಿದರು.
ಭಾರತೀಯ ದಂತವೈದ್ಯರ ಸಂಘದ ರಾಜ್ಯ ಘಟಕ ಶನಿವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ದಂತವೈದ್ಯರ ದಿನಾಚರಣೆಯಲ್ಲಿ ಸಚಿವರು ಮಾತನಾಡಿದರು. ದಂತ ವಿಜ್ಞಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ತಿಳಿವಳಿಕೆ ಇಲ್ಲ. ದಂತರೋಗಗಳ ಬಗ್ಗೆಯೂ ಹೆಚ್ಚಿನ ಅರಿವಿಲ್ಲ. ತುಂಬಾ ನೋವು ಬಂದಾಗ ಮಾತ್ರ ಜನರು ನಿಮ್ಮ ಬಳಿಗೆ ಬರುತ್ತಾರೆ. ಜನಸಾಮಾನ್ಯರಿಗೆ ಹಲ್ಲುಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ವೈದ್ಯರು ಅರಿವು ಮೂಡಿಸಬೇಕು ಎಂದರು.
ಉಚಿತ ನೇತ್ರ ಚಿಕಿತ್ಸೆ ಶಿಬಿರಗಳು ನಡೆಯುವಂತೆಯೇ ಉಚಿತ ದಂತ ಚಿಕಿತ್ಸಾ ಶಿಬಿರಗಳೂ ನಡೆಯಬೇಕು. ಉಚಿತ ಕನ್ನಡಕ ನೀಡುವ ಸ್ವಯಂ ಸೇವಾ ಸಂಸ್ಥೆಗಳು ಉಚಿತವಾಗಿ ಹಲ್ಲುಸೆಟ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉತ್ತಮ ಎಂದೂ ಅವರು ಸಲಹೆ ಮಾಡಿದರು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ. ಎಚ್.ಎನ್. ಕೃಷ್ಣ, ಭಾರತೀಯ ವೈದ್ಯಕೀಯ ಸಂಘದ ಕೇಂದ್ರ ಕಚೇರಿ ಅಧ್ಯಕ್ಷ ಡಾ. ಯು.ಎಸ್. ಕೃಷ್ಣನಾಯಕ್, ಬೆಂಗಳೂರು ಘಟಕದ ಅಧ್ಯಕ್ಷ ಡಾ. ಎಂ.ಸಿ. ಸುಧಾಕರ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.