ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಗ್ಗು ಪ್ರದೇಶದ ಜನರ ನಿದ್ದೆ ಗೆಡಿಸಿರುವ ಮಳೆ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಲ್ಲಿ ಮಳೆ ನಿಂತೇ ಇಲ್ಲ ಸ್ವಾಮಿ. ಬೆಳಗ್ಗೆ ಸುಂದರ ಬಿಸಿಲು. ಸಂಜೆ ಆದೊಡನೆ ಮೋಡಗಳೆಲ್ಲಾ ಒಂದೆಡೆ ಕಲೆಯುತ್ತವೆ. ಗುಡುಗು, ಸಿಡಿಲು ಎದೆ ಗುಂಡಿಗೆ ನಡುಗಿಸುತ್ತವೆ. ದಪ್ಪ ಹನಿಯ ಜೋರು ಮಳೆ ಎಲ್ಲೆಡೆ.

ತಗ್ಗು ಪ್ರದೇಶದ ಜನರಿಗಂತೂ ಮಳೆರಾಯ ನಿದ್ದೆಗೆಡಿಸಿದ್ದಾನೆ. ಮಳೆ ಎಂದರೆ ಇವರು ಬೆಚ್ಚಿ ಬೀಳುತ್ತಾರೆ. ಬೆಂಗಳೂರು ಒಳಚರಂಡಿ ಮಂಡಳಿಗೆ ಹಾಗೂ ಬೆಂಗಳೂರು ನಗರಪಾಲಿಕೆಗೆ ಬೆಂಗಳೂರಿಗರು ಹಿಡಿಶಾಪ ಹಾಕುತ್ತಿದ್ದಾರೆ. ಒಳಚರಂಡಿಯ ನೀರು ಹಾಗೂ ರಸ್ತೆಯಲ್ಲಿ ಹರಿವ ಮಳೆಯ ನೀರು ಮನೆಗಳಿಗೆಲ್ಲಾ ನುಗ್ಗುತ್ತಿದೆ. ರಾತ್ರಿಯಿಡೀ ಮನೆಗೆ ನುಗ್ಗಿದ ನೀರನ್ನು ಹೊರಗೆ ಹಾಕುವುದೇ ದೊಡ್ಡ ಕೆಲಸವಾಗಿದೆ.

ಬೆಂಗಳೂರು ಕೃಷ್ಣರಾಜ ಮಾರುಕಟ್ಟೆ, ಸಂಪಂಗಿರಾಮನಗರ, ವಿವೇಕನಗರವೇ ಮೊದಲಾದ ಸ್ಥಳಗಳೆಲ್ಲಾ ಜಲಾವೃತವಾಗಿವೆ. ರಾಜ್ಯದ ದಕ್ಷಿಣ ಒಳನಾಡಿನ ಅನೇಕ ಕಡೆ ಮಳೆ ಆಗಿದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಒಣಹವೆ ಇತ್ತು. ದೇವನಹಳ್ಳಿಯಲ್ಲಿ 4 ಸೆಂಟಿ ಮೀಟರ್‌, ಶ್ರೀರಂಗಪಟ್ಟಣ, ಸೋಮವಾರಪೇಟೆ, ಮಂಗಳವಾರಪೇಟೆಗಳಲ್ಲಿ 3, ಕೊಣನೂರಿನಲ್ಲಿ 1 ಸೆಂಟಿ ಮೀಟರ್‌ ಮಳೆ ಬಿದ್ದಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯಮಟ್ಟಕ್ಕಿಂತ ಅಧಿಕವಾಗಿತ್ತು.

ರಾಜ್ಯದ ಅತಿ ಹೆಚ್ಚು ತಾಪಮಾನ 39.4 ಡಿಗ್ರಿ ಸೆಲ್ಸಿಯಸ್‌ ರಾಯಚೂರಿನಲ್ಲಿ ದಾಖಲಾಗಿತ್ತು. ಮುನ್ಸೂಚನೆಯ ಪ್ರಕಾರ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಬೀಳುವ ಸಂಭವ ಇದೆ.

ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಬೀಳಲಿದೆ. ದಿನದ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಬಹುತೇಕ ಏಪ್ರಿಲ್‌ ತಿಂಗಳ ಅಂತ್ಯದವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತದೆ ಹವಾಮಾನ ವೀಕ್ಷಣಾಲಯದ ವರದಿ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X