ಧರ್ಮಾಸ್ಪತ್ರೆ ಮಾದರಿಯ ಖಾಸಗಿ ಆಸ್ಪತ್ರೆಗಳಸ್ಥಾಪನೆಗೆ ಕೃಷ್ಣ ಕರೆ
ಬೆಂಗಳೂರು : ತನ್ನಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸೌಲಭ್ಯ ಕಲ್ಪಿಸಲು ಸರ್ಕಾರ ಕಷ್ಟ ಪಡುತ್ತಿರುವಾಗ, ಬಡವರು ಹಾಗೂ ದುಡಿಯುವ ವರ್ಗದವರಿಗೆ ಖಾಸಗಿ ಸಂಸ್ಥೆಗಳು ಉಚಿತ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದು ಗುರುವಾರ ನಾರಾಯಣ ಹೃದಯಾಲಯ ಆಸ್ಪತ್ರೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದರು.
ಸತ್ಯ ಸಾಯಿ ಬಾಬಾ ಆಸ್ಪತ್ರೆ ಕೂಡ ದೀನರ ಬೆಂಬಲಕ್ಕೆ ನಿಂತಿದೆ. ಈ ಸಾಲಿಗೀಗ ನಾರಾಯಣ ಹೃದಯಾಲಯ ಸೇರಿದೆ. ಇಂಥ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಬೇಕು. ಖಾಸಗಿ ಆಸ್ಪತ್ರೆಗಳು ಸರ್ಕಾರದ ಮೇಲಿನ ಹೊರೆಯನ್ನು ಇಳಿಸಬೇಕು ಎಂದು ಕೃಷ್ಣ ಹೇಳಿದರು.
ಖಾಸಗಿ ಆಸ್ಪತ್ರೆಗಳು ಕಾಮಗಾರಿ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡುತ್ತಿದ್ದರೂ, ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡ ಕೆಲವು ವರ್ಷಗಳು ಕಳೆದರೂ ಪ್ರಾರಂಭವಾಗದಿರುವ ಬಗ್ಗೆ ಕೃಷ್ಣ ವಿಷಾದ ವ್ಯಕ್ತಪಡಿಸಿದರು. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶದಲ್ಲಿ ಮೊದಲಿಗನಾಗಿರುವ ಕರ್ನಾಟಕ, ವೈದ್ಯಕೀಯ ಕ್ಷೇತ್ರದಲ್ಲೂ ಮೊದಲಿಗನಾಗುವ ದಿನ ದೂರವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ಆರೋಗ್ಯ ಸಚಿವ ಡಾ. ಎ.ಬಿ. ಮಲಕರೆಡ್ಡಿ , ಶಂಕರ ನಾರಾಯಣ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಸಿ. ನಾರಾಯಣ ಶೆಟ್ಟಿ ಹಾಗೂ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ.ಎಚ್. ಸುದರ್ಶನ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬಡವ- ಬಲ್ಲಿದರಿಬ್ಬರಿಗೂ ನಾರಾಯಣ ಹೃದಯಾಲಯದಲ್ಲಿ ಸಮಾನ ಚಿಕಿತ್ಸೆ
ಹೃದ್ರೋಗದ ಬಗೆಗೆ ಸಾರ್ವಜನಿಕರಿಗೆ ತಿಳಿವಳಿಕೆ, ಚಿಕಿತ್ಸೆ, ಔಷಧಿಗಳ ಮಾಹಿತಿ ಹಾಗೂ ಬಡ ಹೃದ್ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಉದ್ದೇಶದ ನಾರಾಯಣ ಹೃದಯಾಲಯ ನಗರದ ಹೊರವಲಯದ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಕಾರ್ಯಾರಂಭ ಮಾಡಿದೆ.
ದೇಶದ ಜನಪ್ರಿಯ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ ನಾರಾಯಣ ಹೃದಯಾಲಯ ಬಡಬಗ್ಗರಿಗೆ ಸೇವೆ ಒದಗಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. 25 ಎಕರೆ ಭೂಮಿಯಲ್ಲಿ , 200 ಕೋಟಿ ರುಪಾಯಿಗಳ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಆಸ್ಪತ್ರೆ, ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.
ಶೇ. 60 ರಷ್ಟು ಬಡವರಿಗೆ ರಿಯಾಯಿತಿ ದರದಲ್ಲಿ ಅಥವಾ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶವನ್ನು ಹೊಂದಿರುವ ನಾರಾಯಣ ಹೃದಯಾಲಯ, ಉಳಿದಂತೆ ಶೇ. 40 ಶ್ರೀಮಂತ ರೋಗಿಗಳನ್ನು ಉಪಚರಿಸುತ್ತದೆ. ಶ್ರೀಮಂತ ರೋಗಿಗಳಿಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗುವುದು. ಆದರೆ, ಚಿಕಿತ್ಸೆ ಮಾತ್ರ ಉಭಯತ್ರರಿಗೂ ಏಕರೂಪದಲ್ಲಿರುವುದ ಮತ್ತು ಅತ್ಯುತ್ತಮ ಮಾದರಿಯದಾಗಿರುವುದು ಎಂದು ದೇವಿ ಶೆಟ್ಟಿ ತಿಳಿಸಿದ್ದಾರೆ.
ಆಸ್ಪತ್ರೆಯ ಕಾಮಗಾರಿ ಇನ್ನೂ ನಡೆಯುತ್ತಿದ್ದು , ಪ್ರಸ್ತುತ ನೆಲ ಮಹಡಿ ಹಾಗೂ ಮೂರು ಅಂತಸ್ತುಗಳು ಸಿದ್ಧವಾಗಿವೆ. 10 ಶಸ್ತ್ರ ಚಿಕಿತ್ಸಾ ಕೊಠಡಿಗಳು, 280 ಹಾಸಿಗೆಗಳ ಅನುಕೂಲವಿರುವ ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 25-30 ಶಸ್ತ್ರಚಿಕಿತ್ಸೆ ನಡೆಸುವ ಉದ್ದೇಶವನ್ನು ಆಡಳಿತ ಮಂಡಳಿ ಹೊಂದಿದೆ. ಆಸ್ಪತ್ರೆಯ ಕಾಮಗಾರಿ ಪೂರ್ಣಗೊಂಡ ನಂತರ, ಶಸ್ತ್ರ ಚಿಕಿತ್ಸಾ ಕೊಠಡಿಗಳ ಸಂಖ್ಯೆಯನ್ನು 30 ಕ್ಕೆ , ಹಾಸಿಗೆಗಳ ಸಂಖ್ಯೆಯನ್ನು 780 ಕ್ಕೆ ಹೆಚ್ಚುವುದು. ಆಗ, ನಿತ್ಯ 70-80 ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ದೇವಿಶೆಟ್ಟಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)