ಯಡಿಯೂರಪ್ಪ, ನಫೀಸಾ ಫಜಲ್ ಸೇರಿ11 ಜನರ ಸದಸ್ಯತ್ವ ರದ್ದು
ಬೆಂಗಳೂರು : ಕಳೆದ ಜೂನ್ 3ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗಿದ್ದ 11 ಸದಸ್ಯರ ಆಯ್ಕೆಯನ್ನು ರದ್ದು ಪಡಿಸಿ ರಾಜ್ಯ ಹೈಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.
ಜೂನ್ 3ರಂದು ನಡೆದಿದ್ದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸಿ. ರುದ್ರಪ್ಪ ಅವರು ತಿರಸ್ಕರಿಸಿದ್ದರಿಂದ ಕಣದಲ್ಲಿ ಬಾಕಿ ಉಳಿದಿದ್ದ ಎಲ್ಲ 11 ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿದ್ದರು.
ತಮ್ಮ ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ವಾಟಾಳ್ ನಾಗರಾಜ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಶೇಖರ್ ಅವರು ಎಲ್ಲ 11 ಸದಸ್ಯರ ಆಯ್ಕೆ ಅಸಿಂಧು ಎಂಬ ಐತಿಹಾಸಿಕ ತೀರ್ಪು ನೀಡಿದರು.
ಈ ತೀರ್ಪಿನಿಂದಾಗಿ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವೆ ನಫೀಸಾ ಫಜಲ್, ಭಾರತೀಯ ಜನತಾಪಕ್ಷದ ಮುಖಂಡ ಬಿ.ಎಸ್. ಯಡಿಯೂರಪ್ಪ, ಸಂಯುಕ್ತ ಜನತಾದಳದ ಎಂ.ಪಿ. ಪ್ರಕಾಶ್, ರಾಜಶೇಖರನ್, ಮಾಜಿ ಸಂಸದ ಮಾರುತಿರಾವ್ ಮಾಲೆ, ಲೇಔಟ್ ಕೃಷ್ಣಪ್ಪ, ಕರಿಯಣ್ಣ ಸಂಗಟಿ, ವಿ.ಆರ್. ಸುದ-ರ್ಶ-ನ್, ವಿನ್-ಫ್ರೆ-ಡ್ ಡಿಸೋ-ಜಾ, ಜಲ-ಜಾ ನಾಯ-ಕ್ ಹಾಗೂ ವಿಮಲಾಗೌಡ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ.
ಈ ಎಲ್ಲ 11 ಸದಸ್ಯರ ಆಯ್ಕೆಯನ್ನು ರದ್ದು ಪಡಿಸಿರುವ ನ್ಯಾಯಾಲಯ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶಿಸಿದೆ. ಪ್ರತಿವಾದಿಗಳಿಗೆ ಮೇಲ್ಮನವಿ ಸಲ್ಲಿಸಲು 6 ವಾರಗಳ ಕಾಲಾವಕಾಶ ನೀಡಿರುವ ನ್ಯಾಯಮೂರ್ತಿಗಳು ತೀರ್ಪಿನ ಜಾರಿಗೆ 6 ವಾರಗಳ ತಡೆ ನೀಡಿದ್ದಾರೆ.
(ನಮ್ಮ ಪ್ರತಿನಿಧಿಯಿಂದ)