ಭೀಮಾ ನದಿಗೆ 2 ಟಿ.ಎಂ.ಸಿ. ನೀರು ಬಿಡಲು ಮಹಾರಾಷ್ಟ್ರಕ್ಕೆ ಮನವಿ
ಬೆಂಗಳೂರು : ತೀವ್ರ ನೀರಿನ ಸಮಸ್ಯೆಯಿಂದ ತತ್ತರಿಸಿರುವ ವಿಜಾಪುರ ಜಿಲ್ಲೆಯ ನಾಗರಿಕರ ನೀರಿನ ಬವಣೆ ನೀಗಿಸಲು ತತ್ಕ್ಷಣವೇ ಭೀಮಾ ನದಿಗೆ ಕನಿಷ್ಠ 2 ಟಿ.ಎಂ.ಸಿ. ನೀರನ್ನಾದರೂ ಬಿಡುವಂತೆ ಕರ್ನಾಟಕ ರಾಜ್ಯ ಸರಕಾರ ಮಹಾರಾಷ್ಟ್ರಕ್ಕೆ ಮನವಿ ಮಾಡಿದೆ.
ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದರೆ, ಕುಡಿವ ನೀರೂ ದೊರಕದೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಜ್ಜಿನಿ ಜಲಾಶಯದಿಂದ ಕೂಡಲೇ ಭೀಮಾ ನದಿಗೆ 2 ಟಿ.ಎಂ.ಸಿ ನೀರು ಬಿಡುವಂತೆ ಮಹಾರಾಷ್ಟ್ರದ ನೀರಾವರಿ ಸಚಿವ ಅಜಿತ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಿ, ಮಹಾರಾಷ್ಟ್ರ ಸರಕಾರವನ್ನು ಕೋರಲಾಗಿದೆ ಎಂದು ರಾಜ್ಯ ಬೃಹತ್ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದ್ದಾರೆ.
ಪ್ರತಿಪಕ್ಷದ ನಾಯಕರಾದ ಪಿ.ಜಿ.ಆರ್. ಸಿಂಧ್ಯಾ ಹಾಗೂ ಎಂ.ಪಿ. ಪ್ರಕಾಶ್ ಅವರು ಭೀಮಾ ನದಿ ಪಾತ್ರದ ಜನರ ನೀರಿನ ಬವಣೆಯನ್ನು ಪ್ರತ್ಯಕ್ಷ ಕಂಡು ಬಂದಿದ್ದಾರೆ. ಅಲ್ಲಿನ ರೈತರ ಕಷ್ಟವನ್ನು ವಿವರಿಸಿದ್ದಾರೆ ಎಂದೂ ಸಚಿವರು ಹೇಳಿದರು.
ಬಿಜಾಪುರ ಜಿಲ್ಲೆಯ ಇಂಡಿ, ಸಿಂಧಗಿಯಲ್ಲಂತೂ ನೀರಿನ ಬವಣೆ ವಿಪರೀತವಾಗಿದೆ. ರಾಜ್ಯ ಸರಕಾರಕ್ಕೂ ಈ ಬಗ್ಗೆ ಕಾಳಜಿ ಇದೆ. ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಕಾಶಪ್ಪನವರು ಈಗಾಗಲೇ ನೀರು ಬಿಡುವಂತೆ ಕೋರಿ ಮಹಾರಾಷ್ಟ್ರ ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರ ಮಾನವೀಯತೆಯನ್ನು ಎತ್ತಿಹಿಡಿಯಲು ನೀರು ಬಿಟ್ಟೇ ಬಿಡುತ್ತದೆ ಎಂಬ ನಂಬಿಕೆ ತಮಗಿದೆ ಎಂದೂ ಸಚಿವರು ಹೇಳಿದರು.
(ನಮ್ಮ ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...