ಆಂಧ್ರ ಕೈಗೊಂಡಿರುವ 5 ನೀರಾವರಿ ಕಾಮಗಾರಿ ನಿಲ್ಲಿಸಲು ಆಗ್ರಹ
ಬೆಂಗಳೂರು : ಹೆಚ್ಚುವರಿ ನೀರು ಬಳಸಿಕೊಳ್ಳಲು ಆಂಧ್ರಪ್ರದೇಶ ಸರಕಾರ ಅಕ್ರಮವಾಗಿ ಕೈಗೆತ್ತಿಕೊಂಡಿರುವ ಶ್ರೀಶೈಲ ಬಲದಂಡೆ ಹಾಗೂ ಎಡದಂಡೆ ಕಾಮಗಾರಿ, ಭೀಮಾ ಏತ ನೀರಾವರಿ ಯೋಜನೆ, ಪುಲಂಚಿತಲ ಮತ್ತು ತೆಲುಗುಗಂಗಾ ಯೋಜನೆಗಳನ್ನು ಕೈಬಿಡಬೇಕು ಎಂದು ರಾಜ್ಯ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ.
ರಾಜ್ಯದ ಹಿತಕ್ಕೆ ಧಕ್ಕೆಯುಂಟು ಮಾಡುವ ಈ ಯೋಜನೆಗಳನ್ನು ನಿಲ್ಲಿಸುವಲ್ಲಿ ಕೇಂದ್ರ ಸೂಕ್ತ ಕ್ರಮ ಕೈಗೊಳ್ಳದ ಬಗ್ಗೆ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಕೂಡಲೇ ಮಧ್ಯಪ್ರವೇಶಿಸಿ ಅನುಮೋದನೆ ಇಲ್ಲದೆಯೇ ಆಂಧ್ರ ಕೈಗೊಂಡಿರುವ ಈ ಕಾಮಗಾರಿ ನಿಲ್ಲಿಸುವಂತೆ ಸೂಚಿಸಬೇಕು ಎಂದೂ ಅವರು ಆಗ್ರಹಿಸಿದರು.
ಇದನ್ನೆಲ್ಲಾ ನೋಡಿಕೊಂಡು ನಾವು ಮೌನವಾಗಿರಲು ಸಾಧ್ಯವಿಲ್ಲ. ಈ ಸಂಬಂಧ ಸರ್ವಪಕ್ಷ ನಾಯಕರ ಸಭೆ ಕರೆದು ಚರ್ಚಿಸಿ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಪಾಟೀಲ್ ಹೇಳಿದರು. ರಾಜ್ಯದ ಹಿತ ರಕ್ಷಿಸಲು ನ್ಯಾಯಾಲಯದ ಮೊರೆ ಹೋಗಬೇಕೆ ಅಥವಾ ರಾಜಕೀಯ ನಿರ್ಣಯ ಕೈಗೊಳ್ಳಬೇಕೆ ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ತೆಲುಗುಗಂಗಾ ಹಾಗೂ ಶ್ರೀಶೈಲ ಯೋಜನೆಗಳಿಗೆ ಕೇಂದ್ರ ಜಲ ಆಯೋಗದ ಅನುಮತಿ ಇಲ್ಲ. ಈ ಎಲ್ಲ ವಿವರ ಹಾಗೂ ಆಲಮಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಅಂಶಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳು ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಪಾಟೀಲ್ ಹೇಳಿದರು.
ಆಂಧ್ರ ಈಗ ಕೈಗೆತ್ತಿಕೊಂಡಿರುವ 5 ನೀರಾವರಿ ಯೋಜನೆಗಳ ಪೈಕಿ ಉಳಿದ ಮೂರು ಕಾಮಗಾರಿಗಳಿಗೂ ಸಂಪೂರ್ಣ ಒಪ್ಪಿಗೆ ದೊರೆತಿಲ್ಲ. ಆಂಧ್ರಪ್ರದೇಶ ಸರಕಾರ ಕಾನೂನು ಉಲ್ಲಂಘಿಸಿ ಕಾಮಗಾರಿಗಳನ್ನು ಕೈಗೊಂಡು ರಾಜ್ಯದ ಹಿತಕ್ಕೆ ಧಕ್ಕೆ ಉಂಟು ಮಾಡಿದೆ ಎಂದೂ ಅವರು ಆರೋಪಿಸಿದರು.
(ನಮ್ಮ ಪ್ರತಿನಿಧಿಯಿಂದ)