ಗುಲ್ಬರ್ಗಾ ಮಾರ್ಕೆಟ್ಗೆ ಬೆಂಕಿ ಇಬ್ಬರ ಸಾವು, 12 ಕೋಟಿ ನಷ್ಟ
ಗುಲ್ಬರ್ಗಾ : ಗುಲ್ಬರ್ಗಾ ನಗರದ ಮಧ್ಯಭಾಗದಲ್ಲಿರುವ ಪುಟಾಣಿ ಗಲ್ಲಿಯ ಸೂಪರ್ ಮಾರ್ಕೇಟ್ ಅಂಗಡಿಗಳಿಗೆ ಸೋಮವಾರ ಮಧ್ಯರಾತ್ರಿ ಬೆಂಕಿ ಹತ್ತಿಕೊಂಡು 6 ಜವಳಿ ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ. ಇಬ್ಬರು ಸಾವನ್ನಪ್ಪಿದ್ದಾರೆ. ಈ ಬೆಂಕಿ ಅನಾಹುತದಲ್ಲಿ ಸುಮಾರು 10 ರಿಂದ 12 ಕೋಟಿ ರುಪಾಯಿಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಸೋಮವಾರ ರಾತ್ರಿ ನಗರದಲ್ಲಿ ಮಳೆ, ಬಿರುಗಾಳಿಯ ಆರ್ಭಟದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಈ ಹಂತದಲ್ಲಿ ಕಾಣಿಸಿಕೊಂಡ ಬೆಂಕಿ ತನ್ನ ಕೆನ್ನಾಲಿಗೆ ಚಾಚಿತು. ವಿಷಯ ತಿಳಿಯುತ್ತಿದ್ದಂತೆ ಆಳಂದ, ಗುಲ್ಬರ್ಗಾ, ಜೇವರ್ಗಿ, ಸೇಡಂನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹೋರಾಟ ನಡೆಸಿದರಾದರೂ ಅಪಾರ ಹಾನಿಯನ್ನು ತಡೆಯಲು ವಿಫಲರಾದರು.
ಈ ಅಗ್ನಿ ಅನಾಹುತದಲ್ಲಿ ದೇವಾನಂದ್ ಸ್ಯಾರಿ ಸೆಂಟರ್, ದೇವಾನಂದ್ ಕ್ಲಾಥ್ ಸ್ಟೋರ್ಸ್, ದೇವಾನಂದ್ ಡ್ರೆಸ್ ಪಾಯಿಂಟ್, ಕಂಪ್ಯೂಟರ್ ಕಚೇರಿ, ಬಳೆ ಅಂಗಡಿ ಹಾಗೂ ದರ್ಜಿ ಅಂಗಡಿಗಳು ಸುಟ್ಟು ಭಸ್ಮವಾಗಿ ಹೋಗಿವೆ. ಇಬ್ಬರು ವೃದ್ಧರು ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಸಚಿವರಾದ ಖಮರುಲ್ಲಾ ಇಸ್ಲಾಂ, ಬಾಬುರಾವ್ ಚವ್ಹಾಣ್ ಮೊದಲಾದವರು ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಬೆಂಕಿ ಅನಾಹುತಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಶಾರ್ಟ್ಸರ್ಕೀಟ್ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮದುವೆಯ ಕಾಲವಾದ್ದರಿಂದ ನಗರದ ಸುಪ್ರಸಿದ್ಧ ಬಟ್ಟೆ ವ್ಯಾಪಾರಿಗಳಾದ ತುಕಾರಾಮ್ ಸುತ್ರಾವೆ ಅವರು ತಮ್ಮ ದೇವಾನಂದ್ ಜವಳಿ ಅಂಗಡಿಗಳಲ್ಲಿ ಭಾರಿ ಮೊತ್ತದ ಬಟ್ಟೆಗಳನ್ನು ಸಂಗ್ರಹಿಸಿಟ್ಟಿದ್ದರು. ಬೆಂಕಿಯಿಂದ ಕಟ್ಟಡಕ್ಕೂ ಹಾನಿ ಆಗಿದ್ದು, ಸುಮಾರು 10-12 ಕೋಟಿ ರುಪಾಯಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜು ಮಾಡಲಾಗಿದೆ.
(ಗುಲ್ಬರ್ಗಾ ಪ್ರತಿನಿಧಿಯಿಂದ)