ಕಂಪ್ಯೂಟರ್ ಸಾಫ್ಟ್ವೇರ್ ಮೇಲಿನ ತೆರಿಗೆ ರದ್ದು - ಎಸ್.ಎಂ. ಕೃಷ್ಣ
ಬೆಂಗಳೂರು : ಕಂಪ್ಯೂಟರ್ ಸಾಫ್ಟ್ವೇರ್ ಮೇಲೆ ಪ್ರಸಕ್ತ ಆಯವ್ಯಯದಲ್ಲಿ ಹೇರಲಾಗಿದ್ದ ಪ್ರತಿಶತ 4 ರಷ್ಟು ತೆರಿಗೆಯನ್ನು ವಾಪಸ್ಸು ಪಡೆದಿರುವುದಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಕಟಿಸಿದ್ದಾರೆ.
ಭಾನುವಾರ ನಗರದ ಅರಮನೆ ಮೈದಾನದಲ್ಲಿ ಆರಂಭವಾದ ಬೆಂಗಳೂರು ಬಯೋ ಡಾಟ್ ಕಾಮ್ 2001 ನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಸಾಫ್ಟ್ವೇರ್ ಹಿತಾಸಕ್ತಿಯ ಉದ್ದೇಶದಿಂದ ತೆರಿಗೆಯನ್ನು ವಾಪಸ್ಸು ಪಡೆಯುತ್ತಿರುವುದಾಗಿ ಹೇಳಿದರು. ಮೊಬೈಲ್ ಹಾಗೂ ಇಂಟರ್ನೆಟ್ ಸೇವೆ ಪಡೆಯುತ್ತಿರುವವರ ಮೇಲೆ ಹೇರಲಾಗಿದ್ದ ವೃತ್ತಿ ತೆರಿಗೆಯನ್ನೂ ವಾಪಸ್ಸು ಪಡೆಯುತ್ತಿರುವುದಾಗಿ ಕೃಷ್ಣ ಘೋಷಿಸಿದರು.
ಸಾಫ್ಟ್ವೇರ್ ಉತ್ಪನ್ನಗಳ ಮೇಲೆ ತೆರಿಗೆ ಹೇರುವ ಮುಖ್ಯಮಂತ್ರಿಗಳ ಕ್ರಮ , ಐಟಿ ಉದ್ದಿಮೆದಾರರ ಕೆಂಗಣ್ಣಿಗೆ ಪಾತ್ರವಾಗಿದ್ದನ್ನು ಇಲ್ಲಿ ನೆನೆಯಬಹುದು. ಐಟಿ ಪರ ಇಮೇಜನ್ನು ಅಳಿಸಿಕೊಳ್ಳುವ, ಆ ಮೂಲಕ ರೈತರ ಪರ ಗುರ್ತಿಸಿಕೊಳ್ಳುವ ಉದ್ದೇಶದಿಂದ ಕೃಷ್ಣ ಸಾಫ್ಟ್ವೇರ್ ಮೇಲೆ ತೆರಿಗೆ ಹೇರಿದ್ದರು.
ಜೀವ ಜಾತ್ರೆ ಎಂದು ಬಣ್ಣಿಸಲಾಗುತ್ತಿರುವ ಬೆಂಗಳೂರು ಬಯೋ ಡಾಟ್ ಕಾಮ್ 2001 ಭಾನುವಾರದಿಂದ ಮೂರು ದಿನಗಳ ಕಾಲ ನಡೆಯುತ್ತದೆ. ದೇಶ ವಿದೇಶಗಳ ಸುಮಾರು 50 ಜೈವಿಕ ತಂತ್ರಜ್ಞಾನ ಕಂಪನಿಗಳು ಹಾಗೂ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಿದ್ದಾರೆ.
ಸಾಫ್ಟ್ವೇರ್ ಟೈಟಾನಿಕ್ ಮುಳುಗುತ್ತಿದೆ ಎನ್ನುವ ಆತಂಕಗಳ ಬೆನ್ನಿನಲ್ಲೇ ಜೈವಿಕ ತಂತ್ರಜ್ಞಾನ ಮೇಳ ನಡೆಯುತ್ತಿರುವುದು ಗಮನಾರ್ಹ. ಈಗಾಗಲೇ ಮಾಹಿತಿ ತಂತ್ರಜ್ಞಾನದಲ್ಲಿ ಭಾರತದ ಕಾಶಿ ಎನಿಸಿರುವ ಕರ್ನಾಟಕ, ಜೈವಿಕ ತಂತ್ರಜ್ಞಾನದಲ್ಲೂ ಭಾರತದ ಅಗ್ರೇಸರ ಎನಿಸಿಕೊಳ್ಳುವ ನಿಟ್ಟಿನಲ್ಲಿ ಈ ಮೇಳ ಪ್ರಮುಖ ಪಾತ್ರ ವಹಿಸಲಿದೆ.
(ಇನ್ಫೋ ವಾರ್ತೆ)