ಕೃಷ್ಣ ಮನಸ್ಸು ಬದಲಿಸಿದ್ದಾರೆ, ಕಿರಾಣಿ ಅಂಗಡಿಯಲ್ಲಿ ಬಿಯರ್ ಇ-ಲ್ಲ
ಬೆಂಗಳೂರು : ನಗರದ ನೂರು ಕಿರಾಣಿ ಅಂಗಡಿಗಳಲ್ಲಿ ಬಿಯರ್ ಮಾರಲು ಅನುಮತಿ ಕೊಡುವುದಾಗಿ ತೀರ್ಮಾನಿಸಿದ್ದ ಮುಖ್ಯಮಂತ್ರಿ ಕೃಷ್ಣ ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದಾರೆ.
ಮೊದಲು 300 ಕಿರಾಣಿ ಅಂಗಡಿಗಳಲ್ಲಿ ಬಿಯರು ಮಾರಾಟಕ್ಕೆ ಅನುಮತಿ ಕೊಡುವುದಾಗಿ ಹೇಳಿ, ನಂತರ ಪ್ರತಿಭಟನೆಗೆ ಮುಖ ಮಾಡಿದ ಕೃಷ್ಣ, ಆ ಸಂಖ್ಯೆಯನ್ನು 100ಕ್ಕೆ ಇಳಿಸಿದ್ದರು. ಆದರೆ ಇದಕ್ಕೂ ಒಲ್ಲೆ ಎಂಬ ಸೊಲ್ಲೇ ಹೆಚ್ಚಾಯಿತು. ಜನಸಾಮಾನ್ಯರು, ಅದರಲ್ಲೂ ಅನೇಕ ಮಹಿಳಾ ಸಂಘಟನೆಗಳು ದಿನಸಿ ಅಂಗಡಿಗಳಲ್ಲಿ ಬಿಯರ್ ಮಾರಾಟವನ್ನು ತೀವ್ರವಾಗಿ ವಿರೋಧಿಸಿದ್ದರಿಂದ ಮುಖ್ಯಮಂತ್ರಿ ಕೃಷ್ಣ ಈ ನಿರ್ಧಾರ ಕೈಗೊಂಡಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಶನಿವಾರ ಸಂಜೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೃಷ್ಣ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದರು. ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಾದ ಖಾಲಿ ಇರುವ ಹುದ್ದೆಗಳಿಗೆ ಇನ್ನು 4 ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ರಾಜ್ಯ ಸಂಪುಟದ ಮೂಲಕ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಂದಿಯ ಶ್ರೇಯೋಭಿವೃದ್ಧಿಗೆ ಕೃಷ್ಣ ಹೇಳಿದ ಇನ್ನಷ್ಟು ವಿಷಯಗಳು ಇಂತಿವೆ-
- ಪ.ಜಾ. ಹಾಗೂ ಪ.ಪಂ.ದ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ವಿವಿಧ ಯೋಜನೆಗಳು ಸಮರ್ಪಕವಾಗಿ ಸಾಗುತ್ತಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ಸಮಿತಿಯಾಂದನ್ನು ರಚಿಸಲಾಗುವುದು
- ಪ.ಜಾ. ಹಾಗೂ ಪ.ಪಂ.ದ ಅರ್ಹ 5 ಸಾವಿರ ನಿರುದ್ಯೋಗಿಗಳಿಗೆ ವಿವಿಧ ವೃತ್ತಿಗಳಲ್ಲಿ ತರಪೇತಿ ನೀಡುವುದು
- ನಿರುದ್ಯೋಗಿ ಪರವೀಧರರ ಪೈಕಿ 5 ಸಾವಿರ ಮಂದಿಗೆ ಕಂಪ್ಯೂಟರ್ ತರಪೇತಿ
- ಗಂಗಾ ಕಲ್ಯಾಣ ಯೋಜನೆಯಡಿ 5 ಸಾವಿರ ಜನರಿಗೆ ನೀರಾವರಿ ಸೌಲಭ್ಯ
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...