Get Updates
Get notified of breaking news, exclusive insights, and must-see stories!

ಕಾರವಾರ : ಕರಾವಳಿ ತೀರದಿಂದೊಂದು ಕರಪತ್ರ

ಶಿರಸಿ : ಇಂಟರ್‌ನೆಟ್‌ ಯುಗದಲ್ಲಿ ಮಕ್ಕಳಿಗೆ ಶಾಲಾ ಮಟ್ಟದಿಂದಲೇ ಕಂಪ್ಯೂಟರ್‌ ಶಿಕ್ಷಣ ನೀಡುವುದು ಅನಿವಾರ್ಯ. ಮಕ್ಕಳು ಇಂದಿನ ನಾಗಾಲೋಟದ ಯುಗಕ್ಕೆ ಹೊಂದಿಕೊಳ್ಳಲು ಕಂಪ್ಯೂಟರ್‌ ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನದ ಅರಿವು ಅತ್ಯಗತ್ಯ ಎಂದು ಶಾಸಕ ವಿವೇಕಾನಂದ ವೈದ್ಯ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕಂಪ್ಯೂಟರ್‌ ಕೇಂದ್ರ ಉದ್ಘಾಟಿಸಿ ಅವರು, ಮಾತನಾಡುತ್ತಿದ್ದರು. ಶಶಿಕಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ಬಿ. ನಾಯ್ಕ, ಎನ್‌.ಐ.ಐ.ಟಿ ನಿರ್ದೇಶಕ ಪ್ರಭು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅರ್ಜಿ ಆಹ್ವಾನ : ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿಯಲ್ಲಿ ನಡೆಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2001-02ನೇ ಸಾಲಿನ (5ನೇ ತರಗತಿ) ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬಂಧ ಪ್ರವೇಶ ಪರೀಕ್ಷೆಯು ಜೂನ್‌ 6ರಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಅರ್ಜಿ ನಮೂನೆ ಹಾಗೂ ವಿವರಗಳನ್ನು ಆಯಾ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳು ಅಥವಾ ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಶಿರಸಿ ಇಲ್ಲಿಂದ ಪಡೆಯಬಹುದು.

ವಾರ್ಷಿಕ ಆದಾಯ 11 ಸಾವಿರ ರು. ಒಳಗಿರುವವರು, ಹಸಿರು ಕಾರ್ಡ್‌ದಾರರು ಹಾಗೂ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರು. 5ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಕಂಪ್ಯೂಟರ್‌, ಇಂಟರ್‌ನೆಟ್‌ ಶಿಕ್ಷಣ, ಉಚಿತ ವಸತಿ ಸೌಲಭ್ಯ, ಸಮವಸ್ತ್ರ, ಪಠ್ಯಪುಸ್ತಕ, ವೈದ್ಯಕೀಯ ಸೌಲಭ್ಯ, ಉತ್ತಮ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆ ದಿನ ಜೂನ್‌ 4.

ಶ್ರದ್ಧಾಂಜಲಿ : ಈಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಎಡಪಂಥೀಯ ಚಿಂತಕ ಎಂ.ಎಸ್‌. ಧಾರೇಶ್ವರ ಅವರಿಗೆ ಇಲ್ಲಿನ ಮಧುವನ ಹೊಟೆಲ್‌ನ ಆರಾಧನಾ ಹಾಲ್‌ನಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಬ್ಯಾಂಕ್‌ಗೆ ಲಾಭ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವರದಾ ಗ್ರಾಮೀಣ ಬ್ಯಾಂಕ್‌ ಮಾರ್ಚ್‌ 31, 2001ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 110 ಕೋಟಿ ರುಪಾಯಿ ವ್ಯವಹಾರ ನಡೆಸಿ, 1.84 ಕೋಟಿ ರುಪಾಯಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ಗೋಕರ್ಣದಲ್ಲಿ ಸುಗ್ಗಿ ಕುಣಿತ : ಇಲ್ಲಿನ ಪಾರಂಪರಿಕ ಸುಂದರ ಸುಗ್ಗಿ ಕುಣಿತ ಏಪ್ರಿಲ್‌ 6ರ ರಾತ್ರಿ ಇಲ್ಲಿ ನಡೆಯಿತು. ಸುಳಿಸೇಕೇರಿ ತಂಡವು ಅರಸು ಗೌಡರ ನೇತೃತ್ವದಲ್ಲಿ ಸುಗ್ಗಿ ವೇಷ ಕಟ್ಟಿ ಮಹಾಬಲೇಶ್ವರ ಮಂದಿರದ ಮುಂದೆ ಕುಣಿದು ಗೌರವ ಸ್ವೀಕರಿಸಿತು.

ಸಾಹಸ ಶಿಬಿರ : ಭಾರತ ಸೇವಾದಳ ಯಲ್ಲಾಪುರ, ಸ್ಟಾರ್‌ ಕ್ಲಬ್‌ ಯಲ್ಲಾಪುರ ಹಾಗೂ ರೋಟರಿ ಸಂಸ್ಥೆ ಆಶ್ರಯದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಐದು ದಿನಗಳ ಸಾಹಸ ಶಿಬಿರ ಮಾಗೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಕ್ತಾಯಗೊಂಡಿತು. ಯಲ್ಲಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಥಮ ಸ್ಥಾನ : ಬೆಂಗಳೂರಿನ ಭಾರತ ಸಂಸ್ಕೃತ ಪ್ರತಿಷ್ಠಾನ ನಡೆಸಿದ ರಾಮಾಯಣ ಪರೀಕ್ಷೆಯಲ್ಲಿ ಗುಂದದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಕು. ಸವಿತಾ ಆಳ್ಕೆ ಶೇ. 91ರಷ್ಟು ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ತಾಂತ್ರಿಕ ಸಮಾವೇಶ : ಹಳಿಯಾಳದ ಕೃಷಿ ಇಲಾಖೆ ಕಾರ್ಯಾಲಯದಲ್ಲಿ ಈಚೆಗೆ ವೈಪಿಟ್‌ ಯೋಜನೆಯಡಿ ತರಬೇತಿ ಹೊಂದಿದ ರೈತ ಮಹಿಳೆಯರ ತಾಲೂಕು ಮಟ್ಟದ ತಾಂತ್ರಿಕ ಸಮಾವೇಶ ಜರುಗಿತು. ರೈತ ಮಹಿಳೆಯರಲ್ಲಿ ಕೃಷಿ ಕಾರ್ಯಗಳ ಕೌಶಲ ಹೆಚ್ಚಿಸಲು ಈ ಕಾರ್ಯಕ್ರಮ ನಡೆಸಲಾಯಿತು.

ಸನ್ಮಾನ : ಹೊನ್ನಾವರ ಬಳಿಯ ಕೆಂಚಗಾರಿನ ಸೀತಾರಾಮ ದೇವಾಲಯದಲ್ಲಿ ಸೀತಾರಾಮು ಹವ್ಯಾಸಿ ಯಕ್ಷಗಾನ ಮಂಡಳಿ, ಕೆಂಚಗಾರು ಇವರ ಸಹಭಾಗಿತ್ವದಲ್ಲಿ ಯಕ್ಷಗಾನ ರಂಗದ ಖ್ಯಾತ ಭಾಗವತರಾದ ಸುಬ್ರಾಯ ಭಾಗವತ ಕಪ್ಪೆಕೆರೆ ಅವರನ್ನು ಸನ್ಮಾನಿಸಲಾಯಿತು.

(ಕಾರವಾರ ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+