ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ರೇಸಿನಲ್ಲಿಲ್ಲ ದ ಅಲ್ಲಂ ವೀರಭದ್ರಪ್ಪ
ಬೆಂಗಳೂರು : ರಾಜಶೇಖರನ್, ಬಸವರಾಜು, ಮಲಕರೆಡ್ಡಿ , ಜಾಫರ್ ಷರೀಫ್.. ಅವರ್ನ ಬಿಟ್ಟು ಇವರ್ನ ಬಿಟ್ಟು ಅಲ್ಲಂ ವೀರಭದ್ರಪ್ಪ ಎನ್ನುವ ರೇಸಿನಲ್ಲಿಲ್ಲದ ಕುದುರೆಯ ಮೇಲೆ ಸೋನಿಯಾಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೌಜಲಗಿ ರಾಜೀನಾಮೆಯ ನಂತರ ತೆರವಾಗಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಪದಕ್ಕೆ ತೋಟಗಾರಿಕೆ ಸಚಿವ ಅಲ್ಲಂ ವೀರಭದ್ರಪ್ಪ ಅವರ ಹೆಸರನ್ನು ಬುಧವಾರ ದೆಹಲಿಯಲ್ಲಿ ಸೋನಿಯಾ ಹಾಗೂ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಕಟಿಸುವುದರೊಂದಿಗೆ ಹೆಚ್ಚೂ ಕಡಿಮೆ ಒಂದು ವಾರದ ರಾಜಕೀಯ ಚಟುವಟಿಕೆಗಳಿಗೆ ತೆರೆ ಬಿದ್ದಿದೆ.
ಈವರೆಗಿನ ಲೆಕ್ಕಾಚಾರಗಳ ಪ್ರಕಾರ, ಲಿಂಗಾಯಿತ ಧುರೀಣ ಎಂ.ವಿ. ರಾಜಶೇಖರನ್ ಅವರು ಕಾಂಗ್ರೆಸ್ ಅಧ್ಯಕ್ಷರಾಗುವುದು ಖಚಿತವಾಗಿತ್ತು . ಕೃಷ್ಣ ಅವರ ಒಲವು ಕೂಡ ಪುಣ್ಯಕೋಟಿ ಎಂದೆನಿಸಿಕೊಂಡಿರುವ ರಾಜಶೇಖರನ್ ಕಡೆಗಿತ್ತು . ಆದರೆ, ಬಲ್ಲ ಮೂಲಗಳ ಪ್ರಕಾರ, ರಾಜಶೇಖರನ್ ಅವರೇ ಅಧ್ಯಕ್ಷ ಪದವನ್ನು ಒಲ್ಲೆ ಅಂದಿದ್ದಾರೆ. ಪ್ರಸ್ತುತ ಜಪಾನ್ನಲ್ಲಿರುವ ಅವರು, ದೇಹಸ್ಥಿತಿ ಸೂಕ್ಷ್ಮವಾಗಿರುವ ಕಾರಣ ಅಧ್ಯಕ್ಷ ಪದ ನಿರ್ವಹಿಸಲು ಸಾಧ್ಯವಾಗದು ಎಂದಿದ್ದಾರೆ. ಇದರಿಂದಾಗಿ ಅದೃಷ್ಟ ವೀರಭದ್ರಪ್ಪನವರಿಗೊಲಿಯಿತು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಹೊಂದಿರುವುದಕ್ಕೆ ಅಲ್ಲಂ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ಇದೇ ಕಾಲಕ್ಕೆ ಮಂತ್ರಿ ಪದವಿ ಕಳಕೊಳ್ಳುತ್ತಿರುವುದಕ್ಕೆ ಅವರಿಗೆ ಬೇಸರವೂ ಇದೆ. ಅಂದಹಾಗೆ, ವೀರಭದ್ರಪ್ಪನವರಿಗೆ ಈಗಿನ್ನೂ 53 ವರ್ಷ. ಅವರ ಮೊದಲ ಆದ್ಯತೆ ಪಕ್ಷದ ಬಲವರ್ಧನೆಯಂತೆ.
(ಇನ್ಫೋ ವಾರ್ತೆ)