ಬೆಂಗ್ಳೂರು ಬಳಿ 1200 ಕೋಟಿ ರು. ವೆಚ್ಚದ ಭಾರತ ದರ್ಶನ ಪಾರ್ಕ್
ಬೆಂಗಳೂರು : ದೇವನಹಳ್ಳಿ ಸಮೀಪ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 500 ಎಕರೆ ಪ್ರದೇಶದಲ್ಲಿ ಭಾರತದ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಭಾರತ ದರ್ಶನ ಪಾರ್ಕ್ ರೂಪುತಾಳಲಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್, ರಾಜ್ಯದ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಆರ್. ರೋಷನ್ ಬೇಗ್ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ದೆಹಲಿಯ ಯಮುನಾ ನದಿ ತಟದಲ್ಲಿ 1000 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಪಾರ್ಕ್ ಮಾದರಿಯಲ್ಲೇ ದೇವನಹಳ್ಳಿಯ ಬಳಿಯೂ ಭಾರತದ ಭವ್ಯ ಪರಂಪರೆ ಬಿಂಬಿಸುವ ಪಾರ್ಕ್ ನಿರ್ಮಿಸುವ ಈ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಕಾರದೊಂದಿಗೆ 1200 ಕೋಟಿ ರುಪಾಯಿ ಬಂಡವಾಳ ಹೂಡಲು ಹಾಗೂ ಇದಕ್ಕಾಗಿ 500 ಎಕರೆ ಪ್ರದೇಶ ಮೀಸಲಿಡಲು ತೀರ್ಮಾನಿಸಲಾಗಿದೆ. ಅಲ್ಲದೆ ಖಾಸಗಿ ಪಾಲುದಾರಿಕೆಗೂ ಅನುವು ನೀಡಿ, ಉದ್ಯಾನದ ನಿರ್ವಹಣೆಯನ್ನು ಖಾಸಗಿಯವರಿಗೇ ಒಪ್ಪಿಸಲೂ ತೀರ್ಮಾನ ಕೈಗೊಳ್ಳಲಾಗಿದೆ.
ಬಾಹ್ಯಾಕಾಶ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಭಾರತದ ಸಂಸ್ಕೃತಿ, ಪರಂಪರೆಯ ವಿವಿಧ ಪ್ರಕಾರದ ಮಳಿಗೆಗಳನ್ನೂ ಉದ್ಯಾನದಲ್ಲಿ ತೆರೆಯಲು ಯೋಜಿಸಲಾಗಿದೆ. ವಿವಿಧ ರಾಜ್ಯಗಳ ತಿಂಡಿ ತಿನಿಸು, ಅಲ್ಲಿನ ಸಂಸ್ಕೃತಿ, ವಸ್ತ್ರಗಳ ಮಳಿಗೆಗಳಿಗೂ ಅವಕಾಶ ಇದೆ. ಮಕ್ಕಳಿಗಾಗಿ ಮನರಂಜನೆ ನೀಡುವ ಸಾಮಗ್ರಿಗಳೂ ಇಲ್ಲಿರಲಿವೆ. ರಾಜ್ಯ ಸರಕಾರ 500 ಎಕರೆ ಪ್ರದೇಶವನ್ನು ನೀಡಲಿದ್ದು, ವಿಮಾನ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಪಾರ್ಕ್ ನಿರ್ಮಾಣದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತದೆ.
ಈ ಯೋಜನೆಯನ್ನು ಕಾರ್ಯಗತ ಗೊಳಿಸಲು ಕೇಂದ್ರ ಸಚಿವ ಅನಂತಕುಮಾರ್ ಅವರ ನೇತೃತ್ವದಲ್ಲಿ ಕಾರ್ಯದಳವೊಂದನ್ನು ಸಹ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ತಿಂಗಳ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಪಾರ್ಕ್ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಲಾ ಶೇ.13ರಷ್ಟು ಪಾಲುದಾರಿಕೆ ಹೊಂದಲಿದ್ದು ಉಳಿದ 74ರಷ್ಟು ಪಾಲುದಾರಿಕೆ ಖಾಸಗಿಯವರ ಕೈ ಸೇರಲಿದೆ.