ಬೆಂಗಳೂರಿನಲ್ಲಿ ಜೂ.23ರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು : ಅರವತ್ತಂಬತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್ ತಿಂಗಳ 23, 24ಮತ್ತು 25ರಂದು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪ್ರೊ. ಎನ್. ಬಸವಾರಾಧ್ಯ ಹೇಳಿದ್ದಾರೆ.
ತುಮಕೂರಿನಲ್ಲಿ ನಡೆಯಬೇಕಿದ್ದ ಈ ಬಾರಿಯ ಸಮ್ಮೇಳನ, ಅಲ್ಲಿನ ಪ್ರಜಾಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ರದ್ದಾಗಿತ್ತು. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಜಿಲ್ಲೆಯು ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವುದು ಸಾಧ್ಯವಿಲ್ಲ ಎಂದು ಅಧಿಕೃತವಾಗಿ ಹೇಳಿದ ನಂತರ ಬೆಂಗಳೂರಿನಲ್ಲಿ ಸಮ್ಮೇಳನವನ್ನು ಸರಳವಾಗಿ ನಡೆಸಲು ನಿರ್ಧರಿಸಲಾಗಿತ್ತು. ಭಾನುವಾರ ಬೆಂಗಳೂರಿನಲ್ಲಿ ಸಭೆ ಸೇರಿದ ಕಾರ್ಯಕಾರಿ ಸಮಿತಿ ಸಮ್ಮೇಳನದ ದಿನಾಂಕವನ್ನು ನಿರ್ಧರಿಸಲಾಯಿತು.
ಮೇ 20ರಂದು ಸಮ್ಮೇಳನಾಧ್ಯಕ್ಷರ ಆಯ್ಕೆ
ಮೇ ತಿಂಗಳ 20ರಂದು ಹಾಸನದಲ್ಲಿ ಸೇರಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಮುಂದಿನ ವಾರದಲ್ಲಿಯೇ ಸ್ವಾಗತ ಸಮಿತಿಯನ್ನು ರಚಿಸಲಾಗುವುದು ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ. ವೀರಣ್ಣ ತಿಳಿಸಿದ್ದಾರೆ.
ಊಟ, ವಸತಿ ವ್ಯವಸ್ಥೆ ಇಲ್ಲ
ಸಮ್ಮೇಳನದ ಸ್ವರೂಪದ ಬಗ್ಗೆ ತಿಳಿಸಿದ ಬಸವಾರಾಧ್ಯರು ಗುಜರಾತ್ ಭೂಕಂಪದ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಸರಳವಾಗಿ ನಡೆಸಲಾಗುವುದು. ಈ ಬಾರಿ ಪ್ರವೇಶ ಶುಲ್ಕ ಇರುವುದಿಲ್ಲ. ಹಾಗೆಯೇ ಪ್ರತಿನಿಧಿಗಳಿಗೆ ಪ್ರತಿವರ್ಷ ಕಲ್ಪಿಸುತ್ತಿದ್ದ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಕೈ ಬಿಟ್ಟು ಸಾಹಿತ್ಯ ಕುರಿತಂತೆ ಗಂಭೀರ ಚರ್ಚೆಗೆ ಹೆಚ್ಚು ಒತ್ತು ಕೊಡಲಾಗುವುದು ಎಂದರು. ಸರಕಾರ ನೀಡುವ ಅನುದಾನದಲ್ಲಿಯೇ ಸಮ್ಮೇಳನ ನಡೆಯುತ್ತದೆ. ಆದಷ್ಟು ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ ಉಳಿದ ಹಣವನ್ನು ಗುಜರಾತ್ ಸಂತ್ರಸ್ತರ ನಿಧಿಗೆ ನೀಡಲಾಗುವುದು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ, ಆರ್ ಟಿನಗರ ಮೈದಾನ, ಜಯನಗರದ ಜೆಎಸ್ಎಸ್ ಭವನ ಅಥವಾ ಕಂಟೋನ್ಮೆಂಟ್ ಮೈದಾನದಲ್ಲಿ ಸಮೇಳನ ನಡೆಸಲಾಗುವುದು. ಪುಸ್ತಕ ಮಳಿಗೆಗಳನ್ನು ಹಾಕಲು ಸಾಕಷ್ಟು ಜಾಗದ ಅನುಕೂಲತೆಗಳನ್ನು ನೋಡಿಕೊಂಡು ಸ್ಥಳವನ್ನು ನಿರ್ಧರಿಸಲಾಗುವುದು ಎಂದು ಬಸವಾರಾಧ್ಯ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...