ಸಿ.ಇ.ಟಿ. ವಿದ್ಯಾರ್ಥಿಗಳಿಗೆ ಊಟ, ವಸತಿ, ಪ್ರವಾಸದ ಯೋಜನೆ
ಬೆಂಗಳೂರು : ಕರ್ನಾಟಕ ರಾಜ್ಯ ನಡೆಸುವ ಸಿ.ಇ.ಟಿ ಅರ್ಥಾತ್ ವೃತ್ತಿ ಶಿಕ್ಷಣ ಕೋರ್ಸ್ಗಳಿಗೆ ಸಂಬಂಧಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದ ಸಿಇಟಿ ಘಟಕ ನಡೆಸುವ ಈ ಪರೀಕ್ಷೆಗೆ ದೇಶದ ರಾಜಧಾನಿ ದೆಹಲಿ ಹಾಗೂ ಇನ್ನಿತರ ಪ್ರಮುಖ ಪಟ್ಟಣಗಳಿಂದ ವಿಶೇಷ ರೈಲು ಹಾಗೂ ಬಸ್ಗಳೂ ಸಂಚರಿಸುತ್ತವೆ.
ಈ ಬಾರಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮತ್ತೂ ಒಂದು ವಿಶೇಷ ಸೌಲಭ್ಯವನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ಒದಗಿಸಿದೆ. ಪರೀಕ್ಷೆಗೆ ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗಾಗಿ, ಊಟ ಹಾಗೂ ವಸತಿ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸುತ್ತಿದೆ. ಜೊತೆಗೆ ವಿಶೇಷ ಪ್ರವಾಸವೂ ಇದೆ.
ಬಹಳ ವರ್ಷಗಳಿಂದ ಹೊರ ರಾಜ್ಯದ ಹಾಗೂ ಕರ್ನಾಟಕದ ಇತರ ಜಿಲ್ಲೆಗಳ ವಿದ್ಯಾರ್ಥಿಗಳು ಎದುರಿಸುತ್ತಿದ್ದ ವಸತಿ ಸಮಸ್ಯೆಗೆ ಈ ಮೂಲಕ ಪರಿಹಾರ ಸೂಚಿಸುವ ಪ್ರಯತ್ನವನ್ನು ಪ್ರವಾಸೋದ್ಯಮ ಇಲಾಖೆ ಮಾಡುತ್ತಿದೆ. ಮುಂದಿನ ತಿಂಗಳ 16 ಮತ್ತು 17ರಂದು ಸಿ.ಇ.ಟಿ. ಪರೀಕ್ಷೆ. ಮೊದಲ ಹಂತವಾಗಿ ಇಲಾಖೆ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಈ ಊಟ - ವಸತಿ ಸೌಲಭ್ಯ ಕಲ್ಪಿಸುತ್ತಿದೆ.
ವಸತಿ ಸೌಕರ್ಯ ಒದಗಿಸುವ ಸ್ಥಳದಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಸಾರಿಗೂ ವ್ಯವಸ್ಥೆಯನ್ನೂ ಮಾಡುತ್ತಿದೆ. ಇಲಾಖೆಯ ಈ ಸೌಲಭ್ಯ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಏಪ್ರಿಲ್ 25ರೊಳಗೆ ಹೆಸರು ನೊಂದಾಯಿಸಿಕೊಳ್ಳುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ನೊಂದಾವಣೆಗಾಗಿ ಅರ್ಜಿಗಳನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಚೇರಿಗಳಿಂದ ಪಡೆಯಬಹುದು. ಸಿ.ಇ.ಟಿ. ಪರೀಕ್ಷೆಗೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಸುಮಾರು 40 ಸಾವಿಕಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರಕ್ಕೆ ಪ್ರತಿವರ್ಷ ಆಗಮಿಸುತ್ತಾರೆ. ಈ ಸಂದಂರ್ಭದಲ್ಲಿ ನಗರದ ಹೊಟೆಲ್ಗಳ ಬಾಡಿಗೆಯೂ ದುಪ್ಪಟ್ಟಾಗುತ್ತದೆ. ಹೊಟೆಲ್ ರೂಂ ಕೊಡಿಸುವ ದಳ್ಳಾಳಿಗಳೂ ಕೈತುಂಬ ಹಣ ಮಾಡುತ್ತಾರೆ.
ಈ ಸಮಸ್ಯೆ ಕಳೆದ ವರ್ಷವಂತೂ ಅತಿರೇಕಕ್ಕೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸೋದ್ಯಮ ನಿಗಮ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಊಟ, ವಸತಿ, ಸಾರಿಗೆ ವ್ಯವಸ್ಥೆಯ ಯೋಜನೆ ರೂಪಿಸಿದೆ. ಈ ವಿಷಯವನ್ನು ಇಲಾಖೆಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರಮೇಶನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ನಗರದ ವಿವಿಧ ಹೊಟೆಲ್ಗಳಲ್ಲಿ ಊಟ, ವಸತಿ ಸೇರಿ ವಿದ್ಯಾರ್ಥಿಯಾಬ್ಬರಿಗೆ ಆಯಾ ಹೊಟೆಲ್ನ ದರ್ಜೆಗೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ. ಇದು ದಿನವೊಂದರ ವಾಸ್ತವ್ಯಕ್ಕೆ 70ರುಪಾಯಿಯಿಂದ 125 ರುಪಾಯಿಗಳ ಅಂತರದಲ್ಲಿದೆ. ವಿದ್ಯಾರ್ಥಿಗಳೊಂದಿಗೆ ಅವರ ಪಾಲಕರಿಗೂ ಈ ವ್ಯವಸ್ಥೆ ವಿಸ್ತರಿಸಲಾಗಿದೆ.
ಬೆಳಗ್ಗೆ ಕಾಫಿ, ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯೂ ಇದೆ. ಹೊಟೆಲ್ನಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಟ್ಯಾಕ್ಸಿ ಹಾಗೂ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪರೀಕ್ಷೆ ಮುಗಿದ ಬಳಿಕ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ನೋಡ ಬಯಸುವವರಿಗಾಗಿ ವಿಶೇಷ ಪ್ರವಾಸ ಸೌಲಭ್ಯವೂ ಇದೆ.
ಕೇವಲ ಪರೀಕ್ಷೆಯ ಎರಡು ದಿನಗಳಿಗೆ ಅಷ್ಟೇ ಅಲ್ಲದೆ, ಮುಂಚಿತವಾಗಿ ಪರೀಕ್ಷಾ ಸಿದ್ಧತೆ ಹಾಗೂ ತರಬೇತಿಗೆ ಬರುವ ಮತ್ತು ಸಂದರ್ಶನಕ್ಕೆ ಹಾಜರಾಗುವ ಸಂಬಂಧ ಬೆಂಗಳೂರಿನಲ್ಲಿ ಉಳಿಯುವ ವಿದ್ಯಾರ್ಥಿಗಳಿಗೂ ವಿಶೇಷ ಅನುಕೂಲತೆಗಳನ್ನು ಕಲ್ಪಿಸಲಾಗುತ್ತಿದೆ. ಈ ವಿಶೇಷ ಸೌಲಭ್ಯದ ಲಾಭ ಪಡೆದು ಮುಂಚಿತವಾಗಿಯೇ ಕೊಠಡಿ ಕಾಯ್ದಿರಿಸಿಕೊಳ್ಳುವಂತೆ ಇಲಾಖೆ ತಿಳಿಸಿದೆ.