ಮೈಸೂರಿನ ಮರಸೆ ಬಳಿ ಬಸ್- ಕಾರು ಡಿಕ್ಕಿ : 4 ಸಾವು
ಮೈಸೂರು : ಕೆಎಸ್ಸಾರ್ಟಿಸಿ ಬಸ್ಸು ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಎಲ್ಲಾ ನಾಲ್ವರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ನಂಜನಗೂಡು- ಮೈಸೂರು ರಸ್ತೆಯ ಮರಸೆ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಕೃಷ್ಣಪ್ಪ (53), ಶಿವಣ್ಣ (30) ಹಾಗೂ ಬೋರಲಿಂಗಯ್ಯ (28) ಮೃತಪಟ್ಟಿರುವ ಮೂವರು. ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ.
ಕೆಎಸ್ಸಾರ್ಟಿಸಿ ಹೈಟೆಕ್ ಬಸ್ಸು ಬೆಂಗಳೂರಿನಿಂದ ಊಟಿಗೆ ಹೋಗುತ್ತಿತ್ತು. ಅಂಬಾಸಿಡರ್ ಕಾರು ನಂಜನಗೂಡಿನಿಂದ ಮೈಸೂರಿನತ್ತ ಬರುತ್ತಿತ್ತು. ಮರಸೆ ಗ್ರಾಮದ ಟೈರ್ ಕಾರ್ಖಾನೆಯ ತಿರುವಿನ ಬಳಿ ಎರಡೂ ವಾಹನಗಳು ಮುಖಾಮುಖಿಯಾದವು. ಈ ಘಟನೆಯಿಂದ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲು ಒಯ್ಯುತ್ತಿದ್ದಾಗ ಹಾದಿಯಲ್ಲಿ ಇನ್ನೊಬ್ಬರು ಅಸು ನೀಗಿದರು. ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಫಣೀಂದರ್ ಸಿಂಗ್ ಈ ವಿಷಯ ತಿಳಿಸಿದರು.
ಬಸ್ಸಿನಲ್ಲಿದ್ದ ಎಲ್ಲರೂ ಕ್ಷೇಮವಾಗಿದ್ದು, ಯಾರಿಗೂ ಯಾವ ಗಾಯಗಳೂ ಆಗಿಲ್ಲ. ಬಸ್ಸಿನ ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನ ತಲಾಷಿನಲ್ಲಿದ್ದಾರೆ.
(ಇನ್ಫೋ ವಾರ್ತೆ)