ಕರ್ನಾಟಕ ತೆಹಲ್ಕಾ : ಕೃಷ್ಣರ ಮಾತು ಕೇಳದ ಕೌಜಲಗಿ!
ಬೆಂಗಳೂರು : ಲಂಚ ಸ್ವೀಕಾರದ ಟೇಪ್ ಹಗರಣದ ಆರೋಪಿಯಾಗಿರುವ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿ.ಎಸ್. ಕೌಜಲಗಿ ಅವರಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೂಚಿಸಿದ್ದಾರೆ. ಶನಿವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಕೃಷ್ಣ ಈ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಆದರೆ, ತಾವು ನಿರ್ದೋಷಿ, ತಾವು ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿರುವ ಕೌಜಲಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಜಾತ್ಯತೀತ ಜನತಾದಳದ ರಾಜ್ಯ ಘಟಕ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕೌಜಲಗಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
ತೆಹಲ್ಕಾ ಡಾ.ಕಾಂ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಎ.ಬಿ. ವಾಜಪೇಯಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ. ಅದೇ ರೀತಿಯ ಪ್ರಕರಣ ರಾಜ್ಯದಲ್ಲೂ ನಡೆದಿರುವ ಕಾರಣ ಕೌಜಲಗಿ ರಾಜೀನಾಮೆ ನೀಡಲೇಬೇಕು ಎಂದು ಪಕ್ಷದ ಉಪಾಧ್ಯಕ್ಷ ಎನ್.ಎಂ. ನಭಿ ಒತ್ತಾಯಿಸಿದ್ದಾರೆ.
ಹಗರಣದ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರದ ರಾಜೀನಾಮೆಗೆ ಕೂಡ ವಿವಿಧ ಪ್ರತಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಜಾತ್ಯತೀತ ಜನತಾದಳದ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಭ್ರಷ್ಟಾಚಾರ ಹಗರಣದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಎಸ್. ಎಂ. ಕೃಷ್ಣ ರಾಜೀನಾಮೆ ನೀಡಬೇಕು ಎಂದು ಪಿ.ಜಿ.ಆರ್. ಸಿಂಧ್ಯಾ ಒತ್ತಾಯಿಸಿದ್ದಾರೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...