ರಾಜ್ಯದಲ್ಲೊಂದು ತೆಹಲ್ಕಾ : ಕಾಂಗ್ರೆಸ್ ಅಧ್ಯಕ್ಷರರಾಜೀನಾಮೆ ಸಂಭವ
ಬೆಂಗಳೂರು : ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಲಂಚ ಪಡೆದ ಹಗರಣವನ್ನು ತೆಹಲ್ಕಾ ಟೇಪು ಬಯಲು ಮಾಡಿದ ರೀತಿಯಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಕೌಜಲಗಿ ಅವರು ಬೆಳಗಾವಿ ಜಿಲ್ಲಾ ಪಂಚಾಯ್ತಿ ಗುತ್ತಿಗೆ ಕೆಲಸ ಕೊಡಿಸುವ ಸಂಬಂಧ ಲಂಚ ಪಡೆದ ಟೇಪು ಈಗ ಬಹಿರಂಗಗೊಂಡಿದೆ.
ಇದೆಲ್ಲಾ ಕಟ್ಟು ಕತೆ, ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ, ಟೇಪು ಎಲ್ಲಿದೆ, ದುಡ್ಡು ಕೊಟ್ಟವರಾರು? ಎಂದು ಮುಖ್ಯಮಂತ್ರಿ ಕೃಷ್ಣ ತಮ್ಮ ಪಕ್ಷದ ಅಧ್ಯಕ್ಷ ಕೌಜಲಗಿ ಅವರನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಶನಿವಾರ ಬೆಳಗ್ಗೆ ಕನ್ನಡದ ಪ್ರಮುಖ ದಿನಪತ್ರಿಕೆಯಾಂದು ಮೂರು ವರ್ಷಗಳ ಹಿಂದೆ ಕೌಜಲಗಿ ಅವರು ಗುತ್ತಿಗೆದಾರರಿಂದ ಲಂಚ ಹಣ ಸ್ವೀಕರಿಸುತ್ತಿರುವ ಟೇಪ್ನ ಚಿತ್ರಗಳನ್ನು ಮುಖಪುಟದಲ್ಲಿ ಪ್ರಕಟಿಸಿ, ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಈ ಮಧ್ಯೆ ವರಿಷ್ಠ ಮಂಡಳಿಯ ತುರ್ತು ಸೂಚನೆಯ ಮೇರೆಗೆ ಶುಕ್ರವಾರ ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ರಾಜ್ಯ ಕಾಂಗ್ರೆಸ್ ವ್ಯವಹಾರಗಳ ಹೊಣೆ ಹೊತ್ತಿರುವ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ ಹಾಗೂ ಮತ್ತಿತರ ಗಣ್ಯರನ್ನು ಭೇಟಿ ಮಾಡಿ ಚರ್ಚಿಸಿದ ಕೌಜಲಗಿ ಅವರು ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಕೃಷ್ಣ ಅವರು ಕೌಜಲಗಿ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಪಕ್ಷದ ವರ್ಚಸ್ಸಿಗೆ ಕುಂದುಂಟಾಗಿರುವ ಹಿನ್ನೆಲೆಯಲ್ಲಿ ಹಾಗೂ ಲಂಚ ಪಡೆಯುತ್ತಿರುವ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಕೌಜಲಗಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಪರಿಶೀಲಿಸುತ್ತಿದೆ. ಪ್ರತಿಪಕ್ಷಗಳಿಂದ ಕೂಡ ಕೌಜಲಗಿ ರಾಜೀನಾಮೆಗೆ ಒತ್ತಾಯ ಬಂದಿದೆ.
ಕೌಜಲಗಿ ಅವರು ಶನಿವಾರ ಅಥವಾ ಭಾನುವಾರ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಇಂಡಿಯಾ ಇನ್ಫೋ ಡಾಟ್ಕಾಂಗೆ ತಿಳಿಸಿವೆ. ಸಚಿತ್ರ ವರದಿ ಹಾಗೂ ಕೌಜಲಗಿ ಹಾಗೂ ಗುತ್ತಿಗೆದಾರರ ನಡುವಿನ ಮಾತುಕತೆಯ ಪೂರ್ಣಪಾಠವನ್ನು ಪತ್ರಿಕೆಯು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷರು ನುಣುಚಿಕೊಳ್ಳುವ ಸಾಧ್ಯತೆಯೇ ಇಲ್ಲ. ಈಗ ರಾಜೀನಾಮೆ ನೀಡದೆ ವಿಧಿ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...