ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೀಬಿಯಲ್ಲಿ ಶನಿವಾರದಿಂದ ಓಂ ಗಾಯತ್ರಿ ಮಹಾಯಜ್ಞ
ಸೀಬಿ : ತುಮಕೂರು ಜಿಲ್ಲೆಯ ಜನಪ್ರಿಯ ಯಾತ್ರಾಸ್ಥಳ ಸೀಬಿಯಲ್ಲಿ ಏಪ್ರಿಲ್ 7 ರಿಂದ ಎರಡು ದಿನಗಳ ಕಾಲ ಓಂ ಗಾಯತ್ರಿ ಮಹಾಯಜ್ಞ ಹಾಗೂ ಸುದರ್ಶನ ಹೋಮ ನಡೆಸಲಾಗುವುದು.
ತುಮಕೂರಿನ ಓಂ ಗಾಯತ್ರಿ ಯಜ್ಞ ಸಮಿತಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಿರೇಮಗಳೂರಿನ ಶ್ರೀ ಸವ್ಯಸಾಚಿ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಜರುಗುತ್ತವೆ ಎಂದು ಸಮಿತಿಯ ಅಧ್ಯಕ್ಷ ಎಂ.ವಿ. ರಾಮಚಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೀಬಿಯ ಮಮತಾ ಮಹರ್ಷಿ ಆಶ್ರಮದ ಶ್ರೀ ಅವಧೂತ ನಂಜುಂಡ ಸ್ವಾಮಿಗಳು ವೇದ ಘೋಷ ಋತ್ವಿಕ್ ವರುಣ ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಡುವರು. ಈ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಭಾಗವಹಿಸುವರು. ಶಾಸಕ ಆರ್. ನಾರಾಯಣ್, ಸಂಸದ ಬಸವರಾಜು ಮುಂತಾದವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ತುಮಕೂರಿನಿಂದ ಸೀಬಿಗೆ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ಸುಗಳ ಸಂಚಾರವನ್ನು ಏರ್ಪಡಿಸಲಾಗಿದೆ.
(ಇನ್ಫೋ ವಾರ್ತೆ)
Comments
Story first published: Friday, April 6, 2001, 5:30 [IST]