ಶಿವಮೊಗ್ಗ ಟೆಕ್ನಾಲಜೀಸ್ನಿಂದ ಸಹಕಾರಿ ಬ್ಯಾಂಕ್ ಸಾಫ್ಟ್ವೇರ್
ಶಿವಮೊಗ್ಗ : ಸಹಕಾರಿ ಬ್ಯಾಂಕ್ಗಳ ಎಲ್ಲ ದಿನನಿತ್ಯದ ವಹಿವಾಟನ್ನೂ ಕಂಪ್ಯೂಟರೀಕರಿಸಿ, ಕಾಗದವೇ ಇಲ್ಲದೆ ಬ್ಯಾಂಕಿಂಗ್ವ್ಯವಹಾರ ನಡೆಸಲು ನೆರವಾಗುವ ಮಹತ್ವದ ಕೊಂಚ್ ಬ್ಯಾಂಕ್ ಸಾಫ್ಟ್ವೇರ್ ಒಂದನ್ನು ಶಿವಮೊಗ್ಗ ಟೆಕ್ನಾಲಜೀಸ್ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ.
ಕಾಗದದ ಬಳಕೆಯೇ ಇಲ್ಲದೆ, ಸಂಪೂರ್ಣವಾಗಿ ಕಂಪ್ಯೂಟರ್ನಲ್ಲೇ ಸಹಕಾರಿ ಬ್ಯಾಂಕಿನ ಎಲ್ಲ ವ್ಯವಹಾರವನ್ನೂ ಈ ಸಾಫ್ಟ್ವೇರ್ ನೆರವಿನಿಂದ ಮಾಡಬಹುದಾಗಿದೆ. ಶಿವಮೊಗ್ಗ ವಾಣಿಜ್ಯ ಸಂಘದ ಅಧ್ಯಕ್ಷ ಟಿ.ವಿ. ನಾರಾಯಣ ಶಾಸ್ತ್ರಿ ಅವರು, ಕೊಂಚ್ ಬ್ಯಾಂಕ್ ಸಾಫ್ಟ್ವೇರ್ ಅನ್ನು ಇಲ್ಲಿನ ಕುವೆಂಪು ರಂಗಮಂದಿರಲ್ಲಿ ನಡೆದ ಸಮಾರಂಭದಲ್ಲಿ ವಿಧ್ಯುಕ್ತವಾಗಿ ಬಿಡುಗಡೆ ಮಾಡಿದರು.
ಸಹಕಾರಿ ಬ್ಯಾಂಕ್ಗಳ ವಹಿವಾಟು ಸುಗಮವಾಗಿ ನಡೆಯಲು, ಗ್ರಾಹಕರಿಗೆ ಬ್ಯಾಂಕ್ ಇನ್ನೂ ಹತ್ತಿರವಾಗಲು ಹಾಗೂ ಗ್ರಾಹಕ ಸ್ನೇಹಿಯಾಗಿ ಪರಿವರ್ತನೆ ಹೊಂದಲು ಈ ಸಾಫ್ಟ್ವೇರ್ ನೆರವಾಗುತ್ತದೆ ಎಂದು ಕೊಂಚ್ ಬ್ಯಾಂಕ್ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿರುವ ಶಿವಮೊಗ್ಗ ಟೆಕ್ನಾಲಜೀಸ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್. ಸುರೇಶ್ ಈ ಸಂದರ್ಭದಲ್ಲಿ ತಿಳಿಸಿದರು.
ಕಂಪನಿಯ ಕಾರ್ಯದರ್ಶಿ ವಿವೇಕಾನಂದ ನಾಯಕ್ ಅವರು ಶಿವಮೊಗ್ಗ ಟೆಕ್ನಾಲಜೀಸ್ನ ಕಾರ್ಯವೈಖರಿಯ ಪರಿಚಯ ಮಾಡಿಸಿದರು. ಈ ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ರಾಜಗೋಪಾಲ್ ಗಿರಿಮಾಜಿ, ರುಕ್ಮಿಣಿ ವೇದವ್ಯಾಸ್, ಹನುಮಂತರಾವ್ ಹಾಗೂ ರವಳಪ್ಪ ಅವರನ್ನು ಸನ್ಮಾನಿಸಲಾಯಿತು.