ಹೆಣ್ಣು ಮಕ್ಕಳ ಮಾರಾಟ : ಸಮಗ್ರ ತನಿಖೆ ನಡೆಸಲು ಸೂಚನೆ
ಬೆಂಗಳೂರು : ಚಿಂಚೋಳಿ ತಾಲೂಕಿನ ಕೆಲವು ತಾಂಡಾಗಳಲ್ಲಿ ಹೆಣ್ಣುಮಕ್ಕಳ ಮಾರಾಟ ನಡೆದಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಗುಲ್ಬರ್ಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವಿಷಯವನ್ನು ರಾಜ್ಯ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ ಇಲ್ಲಿ ತಿಳಿಸಿದರು.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಲಂಬಾಣಿ ತಾಂಡಾಗಳ 19 ಹೆಣ್ಣು ಮಕ್ಕಳ ಮಾರಾಟ ನಡೆದಿದ್ದು, ಈ ಪೈಕಿ ಮೂರು ಮಕ್ಕಳನ್ನು ಪತ್ತೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಲಂಬಾಣಿ ತಾಂಡಾಗಳಿಗೆ ಖುದ್ದು ಭೇಟಿ ನೀಡಿ, ವಿಚಾರಣೆ ನಡೆಸಿ ರಾಜಧಾನಿಗೆ ವಾಪಸಾದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಈ ಮಕ್ಕಳನ್ನು ಚಿಂಚೋಳಿ ಬಳಿಯ ಆಂಧ್ರಪ್ರದೇಶದ ತಾಂಡಾಪುರದಲ್ಲಿರುವ ಜಾನ್ ಅಬ್ರಾಹಾಂ ಮೆಮೋರಿಯಲ್ ಹೌಸ್ಗೆ ಮಾರಲಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವಿರಾ ಎಂದು ಪತ್ರಕರ್ತರು ಕೇಳಿದಾಗ, ವಿಚಾರಣೆ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ತಿಳಿಸಿದರು.
ಪಾಲಕರು ತಮ್ಮ ಮಕ್ಕಳನ್ನು ಮಾರಾಟ ಮಾಡಲು ಕಡು ಬಡತನವೂ ಒಂದು ಕಾರಣವಾಗಿದ್ದು, ಕೆಲವು ಸೂಲಗಿತ್ತಿಯರು ಕೂಡ ಈ ಮಾರಾಟ ಜಾಲದಲ್ಲಿ ಸೇರಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ ಎಂದೂ ಅವರು ಹೇಳಿದರು.
(ಯು.ಎನ್.ಐ)