ಶಿವಕುಮಾರ ಸ್ವಾಮೀಜಿ ವರ್ಧಂತಿಗೆ ಸಂಸ್ಕೃತಿ- ಸೊಗಡಿನ ಸಿಂಚನ
ತುಮಕೂರು : ಪೂರ್ಣ ಕುಂಭ ಕಲಶ ಹಿಡಿದ ಸಾಲು ಹೆಂಗಳೆಯರು, ವೀರಗಾಸೆ ಕುಣಿತ ಎರಡು ಸಾಲುಗಳು, ನಂದಿ ಕುಣಿತ ಮತ್ತದರ ಹಿಂದೆ ಜಾನಪದ ಕುಣಿತಗಳ ಹಿಂದಿನಿಂದ ಎಳೆಯ ವಯಸ್ಸಿನ ನಡಿಗೆಯಲ್ಲಿ ಜ್ಞಾನವೃದ್ಧ ಡಾ. ಶಿವಕುಮಾರ ಸ್ವಾಮೀಜಿಗಳು ವೇದಿಕೆಗೆ ಬರುತ್ತಿದ್ದಂತೆಯೇ ಸಭೆಯ ತುಂಬಾ ಸ್ವಾಮೀಜಿಗೆ ಜಯಕಾರ ಘೋಷಣೆಗಳು ಮೊಳಗಿದವು. ಭಾನುವಾರ ಸಿದ್ಧಗಂಗೆಯಲ್ಲಿ ಗುರುವಂದನಾ ಕಾರ್ಯಕ್ರಮ ಕಳೆಗಟ್ಟಿದ್ದು ಹೀಗೆ.
ಕಳೆದ 60 ವರ್ಷಗಳಿಂದ ಸತತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಧುನಿಕ ಬಸವಣ್ಣ ಶಿವಕುಮಾರ ಸ್ವಾಮೀಜಿಗಳು 94ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ್ದರು. ಸ್ವಾಮೀಜಿಗಳು ಬಸವಣ್ಣನವರ ತತ್ವಾದರ್ಶಗಳಿಗೆ ಬಗ್ಗಿ ನಡೆದವರು. ಅನ್ನ ದಾಸೋಹದೊಂದಿಗೆ ವಿದ್ಯಾ ದಾಸೋಹವನ್ನು ಪ್ರಶಂಸೆಯ ವಾಂಛೆಯಿಲ್ಲದೆ ನಡೆಸಿಕೊಂಡು ಬಂದವರು. ಶಿಷ್ಯವೃಂದ ಮತ್ತು ಭಕ್ತ ಕೋಟಿ ಅವರಿಗೆ ಗುರುವಂದನಾ ಕಾರ್ಯಕ್ರಮನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದವರು ಮೂರು ಸಾವಿರ ಶಾಖಾ ಮಠದ ಗಂಗಾಧರ ಸ್ವಾಮೀಜಿಗಳು. ಮಾನವ ಧರ್ಮ ಕ್ಕಿಂತ ಶ್ರೇಷ್ಠ ಧರ್ಮ ಇನ್ನೊಂದಿಲ್ಲ ಎಂದು ನಂಬಿ ದುಡಿದ ಶಿವಕುಮಾರ ಸ್ವಾಮೀಜಿಗಳದು. ಇಂದಿನ ವಿಜ್ಞಾನ ಯುಗದಲ್ಲಿ ಧರ್ಮದ ಬಗ್ಗೆ ಯಾರೂ ಗೌರವ ತೋರುತ್ತಿಲ್ಲ ಎಂದು ವಿಷಾದಿಸುತ್ತಾ ಶಿವಕುಮಾರ ಸ್ವಾಮೀಜಿ ಮಾನವ ಪ್ರೇಮಿ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಎ.ಬಿ. ಮಾಲಕರೆಡ್ಡಿ, ಟಿ.ಬಿ. ಜಯಚಂದ್ರ, ರಾಣಿ ಸಚೀಶ್ ಮತ್ತು ಸಂಸದ ಜಿ.ಎಸ್. ಬಸವರಾಜು ಹಾಗೂ, ಜಿ. ಪುಟ್ಟಸ್ವಾಮಿ ಗೌಡ ಅವರು ಉಪಸ್ಥಿತರಿದ್ದರು. ಈ ಸಂದಭಂದಲ್ಲಿ ಟಿವಿಎಸ್ ಎಲೆಕ್ಟ್ರಾನಿಕ್ಸ್ ಕಂಪೆನಿಯ ನಿರ್ದೇಶಕ ಗೋಪಾಲ್ ಶ್ರೀನಿವಾಸ್, ಮಾಜಿ ಉಪಕುಲಪತಿ ಡಾ. ಎಂ. ಎಂ. ಕಲಬುರ್ಗಿ, ಬೆಂಗಳೂರಿನ ರಾಜ ಪುರೋಹಿತ ಸಮಾಜದ ಅಧ್ಯಕ್ಷ ಬಲವಂತ್ ಸಿಂಹ ಮತ್ತು ಚಿಕ್ಕ ವೀರಪ್ಪ ಅವರನ್ನು ಡಾ. ಶಿವಕುಮಾರ ಸ್ಮಾಮೀಜಿಗಳು ಸನ್ಮಾನಿಸಿದರು.
ಸಮುದಾಯ ಭವನಕ್ಕೆ ಶಿಲಾನ್ಯಾಸ
ಗುರುವಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸಮುದಾಯ ಭವನಕ್ಕೆ ಕೆಸರು ಕಲ್ಲು ಹಾಕಿದರು. ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಮೊದಲ ಅನುಭವ ಮಂಟಪವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಶಿವಕುಮಾರ ಸ್ವಾಮೀಜಿಗಳು ವಂದನೀಯರು ಎಂದು ಅಭಿಪ್ರಾಯ ಪಟ್ಟರು.
(ಇನ್ಫೋವಾರ್ತೆ)