ಮೇಲುಕೋಟೆಯಲ್ಲಿ ಸೋಮವಾರ ರಾತ್ರಿ ವೈರಮುಡಿ ಉತ್ಸವ
ಮಂಡ್ಯ : ಮಂಡ್ಯಜಿಲ್ಲೆಯಲ್ಲಿರುವ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಮೇಲುಕೋಟೆಯಲ್ಲಿ ಸೋಮವಾರ ರಾತ್ರಿ ಸುಪ್ರಸಿದ್ಧ ವೈರಮುಡಿ ಉತ್ಸವ ಜರುಗಲಿದೆ. ವೈರಮುಡಿ ಜಾತ್ರೆಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದು, ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ.
ವರ್ಷಕ್ಕೊಮ್ಮೆ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ರಾಜಮುಡಿ, ರಾಜಮುಡಿ, ವೈರಮುಡಿ, ಬ್ರಹ್ಮೋತ್ಸವಗಳು ನಡೆಯುತ್ತವೆ. ಸೋಮವಾರ ರಾತ್ರಿ (ಏ.2) 9 ಗಂಟೆಗೆ ಆರಂಭವಾಗುವ ವೈರಮುಡಿ ಉತ್ಸವ ಬೆಳಗಿನ ಜಾವ 4 ಗಂಟೆಯವರೆಗೂ ನಡೆಯಲಿದೆ.
ವೈರಮುಡಿ ಉತ್ಸವದ ಬಳಿಕ ಚೆಲುವನಾರಾಯಣ ಸ್ವಾಮಿಗೆ ವಜ್ರಖಚಿತವಾದ ರಾಜಮುಡಿಯನ್ನು ತೊಡಿಸಿ ಅಲಂಕರಿಸಲಾಗುತ್ತದೆ. ಮೇಲುಕೋಟೆಯ ವೈರಮುಡಿ ಜಾತ್ರೆಗಾಗಿಯೇ ರಾಜ್ಯದ ವಿವಿಧ ಭಾಗಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಚೆಲುವರಾಯನ ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಶ್ರೀರಾಮನವಮಿಯ ಸಡಗರದ ಜತೆಗೆ ವೈರಮುಡಿ ಜಾತ್ರೆಯ ಸಂಭ್ರಮವೂ ಬೆರೆತಿದೆ.
ಈ ಬಾರಿ ವೈರಮುಡಿ ಜಾತ್ರೆಗೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದು, ಉತ್ಸವ ನೋಡಲು ಉಂಟಾಗುವ ನೂಕು ನುಗ್ಗಲು ತಪ್ಪಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ದೇವಾಲಯದಲ್ಲಿ ಕ್ಲೋಸ್ ಸರ್ಕೀಟ್ ಟೀವಿಗಳನ್ನು ಅಳವಡಿಸಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ತುಕಡಿಗಳು ಭದ್ರತೆಯ ಕಾಯಕದಲ್ಲಿ ನಿರತವಾಗಿವೆ.
(ಮಂಡ್ಯ ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...