ಷಾರ್ಜಾ ಕ್ರಿಕೆಟ್ಟಿಗೆ 20 ವರ್ಷ, ನೆನಪಿಗಾಗಿವಿಕೆಟ್ ಚೆಲ್ಲಿದ ಭಾರತ!
ದುಬೈ : ಕೋಕ ಕೋಲಾ ಟೂರ್ನಿಯಲ್ಲಿ ಭಾರತದ ಭಾಗವಹಿಸುವಿಕೆಯ ಬಗ್ಗೆ ಕೊನೆಯ ಕ್ಷಣದವರೆಗೂ ಆಶಾಭಾವನೆ ಉಳಿಸಿಕೊಂಡಿದ್ದ ಕ್ರಿಕೆಟರ್ಸ್ ಬೆನಿಫಿಟ್ ಫಂಡ್ ಸೀರೀಸ್ (ಸಿಬಿಎಫ್ಎಸ್) ಆಯೋಜಕರಿಗೆ, ಭಾರತ ಸರ್ಕಾರ ಭಾನುವಾರ ತೆಗೆದುಕೊಂಡ ನಿರ್ಣಯ ಅರಗಿಸಿಕೊಳ್ಳುವುದು ಕಷ್ಟವೇ.
ಷಾರ್ಜಾ ಟೂರ್ನಿಯಲ್ಲಿ ಮಾತ್ರವಲ್ಲ , ಇನ್ನು ಮುಂದೆ, ನಿಗದಿತವಾಗಿ ಕ್ರಿಕೆಟ್ ನಡೆಯದ ಸ್ಥಳಗಳಾದ ಷಾರ್ಜಾ, ಸಿಂಗಪುರ, ಟೊರಾಂಟೊ ಮುಂತಾದೆಡೆ ಮೂರು ವರ್ಷಗಳ ಕಾಲ ಭಾರತ ತಂಡ ಆಡುವುದಕ್ಕೆ ತನ್ನ ಅನುಮತಿ ಇಲ್ಲ ಎಂದು ಭಾರತ ಸರ್ಕಾರ ಪ್ರಕಟಿಸಿದೆ. ಅಂದಹಾಗೆ, ಇದೇ ಏಪ್ರಿಲ್ 3 ಕ್ಕೆ ಷಾರ್ಜಾದಲ್ಲಿ ಇತಿಹಾಸದ ಘಟನೆಯಾಂದಕ್ಕೆ ಇಪ್ಪತ್ತು ವರ್ಷಗಳು ತುಂಬುತ್ತಿದೆ. ಅಂದಿಗೆ, ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಷಾರ್ಜಾದಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು .
ಅಂದುಕೊಂಡಂತೆಯೇ ಎಲ್ಲವೂ ಸಾಗಿದ್ದರೆ, ಇದೇ ಏಪ್ರಿಲ್ 8 ರಿಂದ ಷಾರ್ಜಾದಲ್ಲಿ ಚತುಷ್ಕೋನ ಕ್ರಿಕೆಟ್ ಟೂರ್ನಿ ಪ್ರಾರಂಭವಾಗಬೇಕಿತ್ತು . ಭಾರತದ ಹಿಂತೆಗೆತದಿಂದ ಈಗ ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮಾತ್ರ ಕಣದಲ್ಲುಳಿದಿವೆ. ಅಲ್ಲಿಗೆ ಟೂರ್ನಿಯ ಆಕರ್ಷಣೆ ಅರ್ಧಕ್ಕರ್ಧ ಕಡಿಮೆ ಆದಂತೆಯೇ.
ಪಾಕಿಸ್ತಾನ ಹಾಗೂ ಭಾರತ ನಡುವಣ ಪಂದ್ಯವೆಂದರೆ, ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆಯುತ್ತಿದ್ದ ಸಂಗತಿ ಸಿಬಿಎಫ್ಎಸ್ ಸಂಘಟಕರಿಗೆ ಚೆನ್ನಾಗಿ ತಿಳಿದಿದೆ. ಇನ್ನು ಮೂರು ವರ್ಷಗಳ ಕಾಲ, ಆ ಹುಮ್ಮಸ್ಸು , ಚಪ್ಪಾಳೆ, ಗುಂಪು ಷಾರ್ಜಾದಲ್ಲಿ ಕಾಣುವುದಿಲ್ಲ . ಆ ಮಟ್ಟಿಗೆ, ಭಾರತದ ಹಿಂತೆಗೆತ ಸಿಬಿಎಫ್ಎಸ್ಗೆ ಮರ್ಮಾಘಾತವೇ.
ಈ ಮುನ್ನ ಭಾರತ ಹಾಗೂ ಪಾಕಿಸ್ತಾನಗಳು ಷಾರ್ಜಾದಲ್ಲಿ ಮೂರು ವರ್ಷಗಳ ಕಾಲ ಆಡುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆ ಒಪ್ಪಂದ ಈ ಟೂರ್ನಿಯ ನಂತರ ಕೊನೆಗೊಳ್ಳುತ್ತದೆ. ಆದರೆ, ಟೂರ್ನಿಗೆ ಮುನ್ನವೇ ಭಾರತ ಒಪ್ಪಂದದಿಂದ ಹಿಂದೆ ಸರಿದಿದೆ.
ಷಾರ್ಜಾ ಟೂರ್ನಿಯಿಂದ ನಿಜವಾದ ನಷ್ಟ ಯಾರಿಗೆ ?
ಮಾಜಿ ಆಟಗಾರರಿಗೆ ಅನ್ನುತ್ತದೆ ಬಿಸಿಸಿಐ . ಟೂರ್ನಿಯಿಂದಾಗಿ ಭಾರತದ ಮಾಜಿ ಆಟಗಾರರು ಸಹಾಯಧನ ಹೊಂದುತ್ತಿದ್ದರು. ಆದರೆ, ಸರ್ಕಾರದ ನಿರ್ಧಾರದಿಂದಾಗಿ ಈ ಸಹಾಯಧನಕ್ಕೆ ಕಲ್ಲು ಬಿತ್ತು ಎಂದು ಬಿಸಿಸಿಐ ಅಧ್ಯಕ್ಷ ಮುತ್ತಯ್ಯ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಇನ್ನೂ ಸ್ಫೋಟಿಸಿಲ್ಲ .
ಈವರೆಗೆ 167 ಪಂದ್ಯಗಳನ್ನು ನಡೆಸಿರುವ ಷಾರ್ಜಾ ಆಯೋಜಕರು ಹಾಗೂ ಕ್ರಿಕೆಟರ್ಸ್ ಬೆನಿಫಿಟ್ ಫಂಡ್ ಸೀರೀಸ್ನ ಮಂದಿ ಈಗಲೂ ಭಾರತ ತನ್ನ ನಿರ್ಧಾರವನ್ನು ಮರು ಪರಿಶೀಲಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಬ್ಯಾಟಿಂಗ್ ದಿಗ್ಗಜ ತೆಂಡೂಲ್ಕರ್ ಅವರ ಕನಸಿನಂಗಳ ಷಾರ್ಜಾ. ಇಲ್ಲಿನ ಹಸುರ ಕಣದ ಮೇಲೆ ನಿಂತು ಆತ ಚೆಂಡನ್ನು ನಿರಾಯಾಸವಾಗಿ ಬೌಂಡರಿಗಟ್ಟುವುದೇ ಒಂದು ಮಜಾ. ರಾಜಕೀಯ ರಂಗದ ಒತ್ತಡಗಳು ಕ್ರಿಕೆಟ್ ಮೆಕ್ಕಾ ಷಾರ್ಜಾದಲ್ಲಿ ಭಾರತ ಆಡದಂತೆ ಮಾಡಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತನ್ನ ಪಟ್ಟು ಸಡಿಲಿಸಲಿ ಎಂಬುದೇ ಎಲ್ಲರ ಅಭಿಮತ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...