ಅರಸೀಕೆರೆ : ಕೊನೆಗೊಂಡ ನೀರಾ ವಿರುದ್ಧದ ಕಾರ್ಯಾಚರಣೆ
ಹಾಸನ : ನೀರಾ ಇಳಿಸದಿರಲು ಗ್ರಾಮಸ್ಥರು ಒಪ್ಪಿಕೊಂಡಿರುವುದರಿಂದ, ನೀರಾ ವಿರುದ್ಧದ ಕಾರ್ಯಾಚರಣೆಯನ್ನು ಅರಸಿಕೆರೆಯಲ್ಲಿ ಭಾನುವಾರದಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಅರಸೀಕೆರೆ ತಾಲ್ಲೂಕಿನ 24 ಹಳ್ಲಿಗಳಲ್ಲಿನ ಅಬ್ಕಾರೀ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನೀರಾ ನಾಶಪಡಿಸುವ ಕಾರ್ಯಾಚರಣೆಯನ್ನು ಕಳೆದ ಒಂದುವರೆ ತಿಂಗಳಿನಿಂದ ನಡೆಸುತ್ತಿತ್ತು. ಶನಿವಾರ, ತೆಂಗಿನ ತೋಟದಲ್ಲಿದ್ದ ನೀರಾ ಇಳಿಸುವ ಎಲ್ಲ ಮಡಕೆಗಳನ್ನು ಒಡೆದು ಹಾಕಿದ್ದು, ಗ್ರಾಮಸ್ಥರು ಇನ್ನು ಮುಂದೆ ನೀರಾ ಇಳಿಸದೇ ಇರಲು ಒಪ್ಪಿಕೊಂಡಿರುವುದರಿಂದ ಪೊಲೀಸ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಎ. ಸಲೀಂ ಹೇಳಿದ್ದಾರೆ.
ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪವನ್ನು ಅಲ್ಲಗಳೆದ ಸಲೀಂ, ಮಹಿಳೆಯರನ್ನು ಮುಂದೆ ಬಿಟ್ಟು ಪೊಲೀಸರ ಮೇಲೆ ಕಲ್ಲು ತೂರುವ ಮೂಲಕ ಮಹಿಳೆಯರೇ ಪೊಲೀಸರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಪ್ರತಿಯಾಗಿ ಆರೋಪಿಸಿದ್ದಾರೆ.
ಮುಂದುವರೆಯಲಿರುವ ರೈತ ಸಂಘದ ಹೋರಾಟ
ತೆಂಗು ಬೆಳೆಗೆ ಬಂದ ವಿಪತ್ತನ್ನು ಪರಿಹರಿಸಲು ಹಮ್ಮಿಕೊಂಡ ನೀರಾ ಚಳುವಳಿಯನ್ನು ರಾಜ್ಯದ ಎಲ್ಲೆಡೆಗೂ ವಿಸ್ತರಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ. ನಂಜುಂಡ ಸ್ವಾಮಿ ಹೇಳಿದ್ದಾರೆ. ಈ ನಡುವೆ ಏಪ್ರಿಲ್ ಒಂದರ ಭಾನುವಾರ, ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಂಘದ ಎಲ್ಲಾ ಸದಸ್ಯರೂ ಭಾಗವಹಿಸುವರು.
ನೀರಾ ಚಳವಳಿಯನ್ನು ಬೆಂಬಲಿಸಲು ಅರಸೀಕೆರೆಯಲ್ಲಿ ಶಾಂತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರಿನ ಜಯ ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.
(ಇನ್ಫೋ ವಾರ್ತೆ)