ಕನಕ, ಆದಿಕೇಶವನ ರಥೋತ್ಸವಕ್ಕೆ ಸಜ್ಜಾಗಿರುವ ಕಾಗಿನೆಲೆ
ಬೆಂಗಳೂರು : ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಏಪ್ರಿಲ್ ಎರಡರಂದು ಪ್ರಥಮ ಕನಕ ರಥೋತ್ಸವವನ್ನು ನಡೆಸಲು ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠ ನಿಶ್ಚಯಿಸಿದೆ.
ಕನಕ ರಥೋತ್ಸವದ ವಿಷಯವನ್ನು ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಉತ್ಸವದಲ್ಲಿ ಕನಕದಾಸ ಮತ್ತು ಅವರ ಆರಾಧ್ಯ ದೈವ ಆದಿಕೇಶವನ ಮೂರ್ತಿಯನ್ನು ಒಂದೇ ರಥದಲ್ಲಿಟ್ಟು ಮೆರವಣಿಗೆ ನಡೆಸಲಾಗುವುದು. ಕನಕದಾಸರ ತತ್ವ ಮತ್ತು ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ರಥೋತ್ಸವವನ್ನು ಆಚರಿಸಲಾಗುವುದು ಎಂದರು.
ತಾರಕಾನಂದಪುರಿ ಸ್ವಾಮೀಜಿಗಳ ನಾಲ್ಕು ಮಂದಿ ಶಿಷ್ಯರ ನೇತೃತ್ವದಲ್ಲಿ ಮಾರ್ಚ್ 21ರಿಂದ , ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕನಕ ಜ್ಯೋತಿ ಮೆರವಣಿಗೆ ಆರಂಭವಾಗಿದೆ. ಏಪ್ರಿಲ್ 2ರಂದು ನಾಲ್ಕೂ ಜ್ಯೋತಿಗಳು ಕಾಗಿನೆಲೆಯನ್ನು ತಲುಪಲಿವೆ.
ರಥೋತ್ಸವದ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಲಕ್ಕಪ್ಪ ಗೌಡರನ್ನು ಸನ್ಮಾನಿಸಲಾಗುವುದು. ಕಾಗಿನೆಲೆಯಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯಾತ್ರಿನಿವಾಸ್ ಮತ್ತು 10 ಲಕ್ಷ ರೂ. ವೆಚ್ಚದ ಕನಕ ಸಂಸ್ಕೃತ ಮಹಾವಿದ್ಯಾಲಯಕ್ಕೆ ಶಿಲಾನ್ಯಾಸವನ್ನೂ ಇದೇ ಸಂದರ್ಭದಲ್ಲಿ ನೆರವೇರಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
(ಇನ್ಫೋ ವಾರ್ತೆ)