ಕೊತ್ವಾಲನ ಪಟ್ಟಾ ಶಿಷ್ಯ ಕುಖ್ಯಾತಜೇಡರಹಳ್ಳಿ ಕೃಷ್ಣಪ್ಪನಿಗೆ ಕೋಳ
ಬೆಂಗಳೂರು : ಕೊತ್ವಾಲ ರಾಮಚಂದ್ರನ ಬಲಗೈ ಭಂಟ ಎಂದು ಹೆಸರಾಗಿದ್ದ ಹಾಗೂ ಕೊಲೆ, ಸುಲಿಗೆ, ದರೋಡೆ ಮುಂತಾದ 17 ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಜೇಡರಹಳ್ಳಿ ಕೃಷ್ಣಪ್ಪ ಶುಕ್ರವಾರ ರೌಡಿ ನಿಗ್ರಹ ದಳದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದು ಇತ್ತೀಚಿನ ದಿನಗಳಲ್ಲಿ ರೌಡಿ ನಿಗ್ರಹ ದಳದವರು ಸಾಧಿಸಿದ ಬಹುದೊಡ್ಡ ಯಶಸ್ಸಾಗಿದೆ.
ಬಂಧಿತ ಆರೋಪಿಯಿಂದ ಗುಂಡು ತುಂಬಿದ್ದ ಅಮೆರಿಕಾದ ಪಾಯಿಂಟ್ 38 ರಿವಾಲ್ವರ್, ಮಚ್ಚು , ಚಾಕು, 10 ಸಾವಿರ ರುಪಾಯಿ ನಗದು ಹಾಗೂ ಒಂದು ಲಕ್ಷ ರುಪಾಯಿಯ ಚೆಕ್ಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಹೊರವಲಯದಲ್ಲಿ ನಿರ್ಮಿಸಲಾಗಿರುವ ದೇವಸ್ಥಾನ ಉದ್ಘಾಟನೆಯ ಆಹ್ವಾನ ಪತ್ರಿಕೆಯನ್ನು ನೀಡಲು ತೆರಳುತ್ತಿದ್ದಾಗ ಭೂಪಸಂದ್ರದ ಸಮೀಪ ಪೊಲೀಸರು ಕೃಷ್ಣಪ್ಪನನ್ನು ಬಂಧಿಸಿದ್ದಾರೆ.
ಜೇಡರಹಳ್ಳಿ ಕೃಷ್ಣಪ್ಪನೊಂದಿಗೆ ಆತನ ಸಹಚರ ಎಲೆನಾಗನ ತಮ್ಮ ರಮೇಶನನ್ನೂ ಬಂಧಿಸಲಾಗಿದೆ. ಕಾರಿನಲ್ಲಿದ್ದ ಇತರ ಮೂವರು ಸಹಚರರಾದ ಶ್ರೀನಿವಾಸ್, ಮೋಹನ್ ಹಾಗೂ ರಂಗನಾಥ್ ನಾಯ್ಡು ಪರಾರಿಯಾಗಿದ್ದಾರೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಚಿಕ್ಕಪೇಟೆ ಎಸಿಪಿ ಜಿ.ಎ. ಭಾವ, ಪೀಣ್ಯ ಠಾಣೆಯ ಇನ್ಸ್ಪೆಕ್ಟರ್ ಅಬ್ದುಲ್ ಅಜೀಂ, ಬಸವೇಶ್ವರ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೌರಿ ಭಾಗವಹಿಸಿದ್ದರು.
ಕುಖ್ಯಾತ ರೌಡಿ ಲೇಔಟ್ ಮಂಜನ ಕೊಲೆ, 1989 ರಲ್ಲಿ ಬಾಂಬ್ ಎಸೆತ, 1987 ರಲ್ಲಿ ಸಂಪತ್ಕುಮಾರ್ ಎನ್ನುವ ವ್ಯಕ್ತಿಯ ಕೊಲೆ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಜೇಡರಹಳ್ಳಿ ಎರಡು ವರ್ಷಗಳ ಹಿಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಹೊಂದಿದ್ದ .
ಪ್ರಕರಣದಲ್ಲಿ ಮಂತ್ರಿಯ ಹೆಸರು : ಪೊಲೀಸರು ಜೇಡರಹಳ್ಳಿಯನ್ನು ಬಂಧಿಸಿದ ಸಮಯದಲ್ಲಿ ಆತ ರೇಷ್ಮೆ ಮತ್ತು ಜವಳಿ ಖಾತೆ ಸಚಿವ ಎಂ. ಮಹಾದೇವ ಅವರ ಮನೆಗೆ ದೇವಸ್ಥಾನದ ಉದ್ಘಾಟನೆಗೆ ಆಹ್ವಾನಿಸಲು ತೆರಳುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಮಹಾದೇವ ಅವರು ತಮಗೂ ಜೇಡರಹಳ್ಳಿಗೂ ಪರಿಚಯವಿಲ್ಲ . ಆತನನ್ನು ಎಂದೂ ನೋಡಿಲ್ಲ ಎಂದಿದ್ದಾರೆ.
(ಇನ್ಫೋ ವಾರ್ತೆ)