ಏ. 1ರಂದು ಡಾ. ಶಿವಕುಮಾರ ಸ್ವಾಮಿಗಳ 94ನೇ ಜನ್ಮದಿನೋತ್ಸವ
ತುಮಕೂರು : ಸಿದ್ಧಗಂಗಾ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮಿಗಳ 94ನೇ ಜನ್ಮದಿನೋತ್ಸವ ಏಪ್ರಿಲ್ 1ರ ಭಾನುವಾರ ಬೆಳಗ್ಗೆ ಸಿದ್ದಗಂಗಾ ಮಠದ ಸಭಾಂಗಣದಲ್ಲಿ ನಡೆಯಲಿದೆ. ಗುರುವಂದನೆಯ ಈ ಕಾರ್ಯಕ್ರಮಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.
ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಗುರುವಂದನಾ ಮಹೋತ್ಸವದ ಅಧ್ಯಕ್ಷತೆಯನ್ನು ಬೈಲಹೊಂಗಲ ಮಠದ ಶ್ರೀ ಗಂಗಾಧರ ಸ್ವಾಮಿಗಳು ವಹಿಸಲಿದ್ದಾರೆ. ರಾಜ್ಯಪಾಲರಾದ ವಿ.ಎಸ್. ರಮಾದೇವಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಿದ್ಧಗಂಗಾ ಮಠದ ಕಿರಿಯ ಸ್ವಾಮಿಗಳು ಭಕ್ತಿ ಸಮರ್ಪಣೆ ಮಾಡುವರು. ಈ ವಿಷಯವನ್ನು ಶ್ರೀ ಗುರುವಂದನಾ ಮಹೋತ್ಸವ ಸಮಿತಿ ಸಂಚಾಲಕ ಡಾ. ಎಂ.ಎನ್. ಚನ್ನಬಸಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ 25 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತಿಥಿಗೃಹದ ಪ್ರಾರಂಭೋತ್ಸವ ಹಾಗೂ ಹತ್ತು ಸಾವಿರ ಜನರು ಒಂದೇ ಬಾರಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತಹ ಬೃಹತ್ ಸಮುದಾಯ ಭವನ ಶಿಲಾನ್ಯಾಸ ಕಾರ್ಯಕ್ರಮವೂ ಜರುಗಲಿದೆ. ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಸ್ವಾಮಿಗಳ 94ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಸಚಿವರುಗಳಾದ ಡಾ. ಮಲಕರೆಡ್ಡಿ, ಟಿ.ಬಿ. ಜಯಚಂದ್ರ, ರಾಣಿ ಸತೀಶ್, ಪ್ರೊ. ಬಿ.ಕೆ. ಚಂದ್ರಶೇಖರ್, ಡಾ. ಜಿ. ಪರಮೇಶರ್, ಸಂಸತ್ ಸದಸ್ಯರಾದ ಜಿ.ಎಸ್. ಬಸವರಾಜು, ಆರ್.ಎಲ್. ಜಾಲಪ್ಪ, ಚಿತ್ರನಟ ಹಾಗೂ ಸಂಸದ ಶಶಿಕುಮಾರ್ ಮೊದಲಾದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದೂ ಅವರು ತಿಳಿಸಿದರು.
(ತುಮಕೂರು ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...