ಮಹಿಳಾ ಮೀಸಲಾತಿ ಮಸೂದೆಗೆನೂರೆಂಟು ತಡೆ - ಮೋಟಮ್ಮ
ಮಂಗಳೂರು : ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗುತ್ತಿದೆಯಾದರೂ ಅದು ಅಂಗೀಕಾರವಾಗದಂತೆ ಸಂಚು ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೋಟಮ್ಮ ವಿಷಾದಿಸಿದ್ದಾರೆ.
ಕೋಣಾಜೆಯ ಮಂಗಳಗಂಗೋತ್ರಿಯಲ್ಲಿ ಸಮಾಜ ಶಾಸ್ತ್ರ ವಿಭಾಗವು ರಾಜ್ಯ ಮಹಿಳಾ ಅಭಿವೃದ್ಧಿ ವಿಭಾಗದೊಂದಿಗೆ ಹಮ್ಮಿಕೊಂಡಿದ್ದ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಮಹಿಳಾ ಸಬಲೀಕರಣ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹೆಣ್ಣು ಮಕ್ಕಳಿಗೆ ದಕ್ಷತೆಯ ರಾಜಕಾರಣ ಸಾಧ್ಯವಿದೆ ಎನ್ನುವುದಕ್ಕೆ ಹಿಂದಿನ ವೀರ ರಾಣಿಯರೇ ಉದಾಹಣೆ. ಈ ನಿಟ್ಟಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗುವಂತೆ ಪ್ರಜ್ಞಾವಂತರು ಹೋರಾಡಬೇಕು ಎಂದು ಸಚಿವೆ ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ಅವರು, ಮಹಿಳೆಯರ ಅಭಿವೃದ್ಧಿಯತ್ತ ಗಮನ ಹರಿಸದೇ ಇದ್ದಲ್ಲಿ ದೇಶ ಅಭಿವೃದ್ಧಿಯಾಗದು ಎಂದರು. ಕಾರ್ಯಕ್ರಮದಲ್ಲಿ ವಿವಿಯ ಉಪಕುಲಪತಿ ಪ್ರೊ. ಎಸ್. ಗೋಪಾಲ್, ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಮೊಹಮ್ಮದ್, ರಿಜಿಸ್ಟ್ರಾರ್ ಡಾ. ಕೆ. ಜನಾರ್ದನ್ ಹಾಜರಿದ್ದರು.
(ಮಂಗಳೂರು ಪ್ರತಿನಿಧಿಯಿಂದ)