ತಾಂತ್ರಿಕ ದೋಷ, ಬೆಂಕಿ, ಜಿಎಸ್ಎಲ್ವಿ ಉಡ್ಡಯನಕ್ಕೆ ಹಿನ್ನಡೆ
ಶ್ರೀಹರಿಕೋಟಾ : ಭಾರೀ ನಿರೀಕ್ಷೆ ಮೂಡಿಸಿದ್ದ ಮೂರು ಹಂತಗಳ ಜಿಯೋ ಸಿಂಕ್ರೋನಸ್ ಉಪಗ್ರಹ ಉಡ್ಡಯನ ವಾಹನ (ಜಿ.ಎಸ್.ಎಲ್.ವಿ) ಆಂಧ್ರಪ್ರದೇಶದ ಶ್ರೀಹರಿ ಕೋಟಾದಿಂದ ಮೇಲೆ ಹಾರುವಲ್ಲಿ ಬುಧವಾರ ವಿಫಲವಾಯಿತು. ಇದರಿಂದಾಗಿ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.
ಬುಧವಾರ ಮಧ್ಯಾಹ್ನ 3.55ರ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಉಡಾವಣೆಗೆ ಕೆಲವೇ ಕ್ಷಣಗಳು ಬಾಕಿ ಇದ್ದಾಗ, ಉಡಾವಣೆ ಸ್ಥಳದಲ್ಲೇ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಜಿಎಸ್ಎಲ್ವಿ ಉಡಾವಣೆಯ ನೇರ ಪ್ರಸಾರ ಮಾಡುತ್ತಿದ್ದ ದೂರದರ್ಶನ ತನ್ನ ನೇರ ಪ್ರಸಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿತು.
ಭೂಮಿಯಿಂದ ಮೇಲಕ್ಕೆ 36,000 ಕಿ.ಮೀಟರ್ ಕಕ್ಷೆಯಲ್ಲಿ ಸುಮಾರು 2000 ಕೆ.ಜಿ. ತೂಕದ ಉಪಗ್ರಹ ಕೊಂಡೊಯ್ಯುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದ್ದ ಜಿ.ಎಸ್.ಎಲ್.ವಿ. ಮೂರು ಹಂತಗಳ ಉಡ್ಡಯನ ವಾಹನವಾಗಿದ್ದು, 49 ಮೀಟರ್ ಎತ್ತರವಿದೆ.
ಜಿಯೋ ಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹವನ್ನು ಸ್ಥಾಪಿಸುವ ರೀತಿಯಲ್ಲಿ ಜಿ.ಎಸ್.ಎಲ್.ವಿ.ಯನ್ನು ವಿನ್ಯಾಸ ಮಾಡಲಾಗಿತ್ತು. ಸಾಲಿಡ್, ಲಿಕ್ವಿಡ್ ಮತ್ತು ಕ್ರಯೋಜನಿಕ್ ಹಂತಗಳಲ್ಲಿ ವಾಹಕವನ್ನು ಸಿದ್ಧಪಡಿಸಲಾಗಿತ್ತು. ಸತತ ಪರೀಕ್ಷೆಗಳ ತರುವಾಯ ಬುಧವಾರ ಉಡಾವಣೆಗೆ ಸಮಯ ನಿಗದಿಗೊಳಿಸಲಾಗಿತ್ತು.