ರಕ್ಷಣಾ ಹಗರಣ : ಸಿಬಿಐ ರಂಗಕ್ಕಿಳಿಯಲು ಕಾಂಗ್ರೆಸ್ ಆಗ್ರಹ
ಬೆಂಗಳೂರು : ರಕ್ಷಣಾ ಒಪ್ಪಂದಗಳಲ್ಲಿನ ಅವ್ಯವಹಾರದ ತನಿಖೆಗಾಗಿ ನೇಮಿಸಿರುವ ನ್ಯಾಯಮೂರ್ತಿ ವೆಂಕಟ ಸ್ವಾಮಿ ಆಯೋಗದ ಬಗ್ಗೆ ಕಾಂಗ್ರೆಸ್ಪಕ್ಷ ಗುಮಾನಿ ವ್ಯಕ್ತ ಪಡಿಸಿದ್ದು , ಪ್ರಕರಣದ ಬಗ್ಗೆ ತನಿಖೆಗಾಗಿ ಸಿಬಿಐ ತಕ್ಷಣದಿಂದಲೇ ರಂಗಕ್ಕಿಳಿಯಬೇಕೆಂದು ಆಗ್ರಹಿಸಿದೆ.
ವೆಂಕಟಸ್ವಾಮಿ ಆಯೋಗದ ರಚನೆ ಕೇಂದ್ರ ಸರ್ಕಾರದ ಕಣ್ಣೊರೆಸುವ ಹಾಗೂ ತನಿಖೆಯ ನಿಧಾನಗೊಳಿಸುವ ತಂತ್ರವಾಗಿದೆ ಎಂದು ಪಕ್ಷದ ನಿಲುವು ಒಲವುಗಳನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪಕ್ಷದ ರಾಜ್ಯಾಧ್ಯಕ್ಷ ವಿ.ಎಸ್. ಕೌಜಲಗಿ ಹೇಳಿದರು.
ಕೇಂದ್ರ ಸರ್ಕಾರದ ಅವ್ಯವಹಾರಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾರ್ಚ್ 30 ರಿಂದ ರಾಜ್ಯಾದ್ಯಂತ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ಏರ್ಪಡಿಸಲಾಗುವುದು. ಅಂದು, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಪ್ರತಿಭಟನಾ ಪತ್ರ ಸಲ್ಲಿಸಲಾಗುವುದು ಎಂದು ಕೌಜಲಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪಕ್ಷದ ವೀಕ್ಷಕ ಕೆ.ಎಂ. ಖಾನ್, ದೇಶದ ರಕ್ಷಣೆಯನ್ನು ಎನ್ಡಿಎ ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ವಾಜಪೇಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸೋನಿಯಾ ಅವರ ಕಾರ್ಯದರ್ಶಿ ಜಾರ್ಜ್ ಅವರ ಮೇಲೆ ದಾವೆ ಹೂಡಿರುವ ಸಿಬಿಐ ಕ್ರಮ, ತೆಹಲ್ಕಾ ಪ್ರಕರಣವನ್ನು ಪಕ್ಕಕ್ಕೆ ಸರಿಸುವ ಸ್ಟಂಟ್ ಎಂದು ಖಾನ್ ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ , ವಾಜಪೇಯಿ ಮುಖ್ಯವಾಹಿನಿಯ ವಿರುದ್ಧ ಈಜುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರು ಮುಳುಗುವುದು ಖಚಿತ ಎಂದರು.
(ಯುಎನ್ಐ)