ಹೂಹಾಸಿಗೆ ಮೇಲೆ ಪವಡಿಸಿದವರಿಗೆ ಕೇಳಿಸೀತೆ ಈ ಮುಳ್ಳಿನ ಕೂಗು
ಬೆಂಗಳೂರು : ಸತ್ಯಾಗ್ರಹ, ಮೆರವಣಿಗೆಗಳು ಅರ್ಥ ಕಳೆದುಕೊಂಡ ಮೇಲೆ ಪ್ರತಿಭಟನೆಯಲ್ಲೂ ಹೊಸ ಹೊಸ ಬಗೆಗಳು ಹುಟ್ಟಿಕೊಂಡಿವೆ. ಪಂಜಿನ ಮೆರವಣಿಗೆ, ಆಮರಣ ಉಪವಾಸ, ಮಾನವ ಸರಪಳಿ, ಕತ್ತೆಗಳ ಮೆರವಣಿಗೆ, ಅರೆಬೆತ್ತಲೆ ಮೆರವಣಿಗೆ, ಉರುಳು ಸೇವೆ, ಕಪ್ಪು ಪಟ್ಟಿ ಪ್ರದರ್ಶನ, ಶಂಖ ಜಾಗಟೆ, ತಮಟೆ, ನಗಾರಿ ಬಾರಿಸುವ ಪ್ರದರ್ಶನಗಳೆಲ್ಲಾ ಈಗ ಔಟ್ಡೇಟೆಡ್ ಆಗಿ ಹೋಗಿದೆ.
ಈಗ ಹೊಸದೊಂದು ಬಗೆಯ ಪ್ರತಿಭಟನೆ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮನೆ ಮುಂದೆ ನಡೆಯಲಿದೆ. ಶಾಶ್ವತ ಅನುದಾನ ರಹಿತ ಶಾಲಾ ಕಾಲೇಜುಗಳ ನೌಕರರಿಗೆ ಸೇವಾ ಭದ್ರತೆ ಮತ್ತು ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯದ ಅನುದಾನ ರಹಿತ ಶಾಲಾ ಕಾಲೇಜುಗಳ ನೌಕರರ ಹಾಗೂ ಆಡಳಿತ ಮಂಡಳಿಯ ಒಕ್ಕೂಟದ ಅಧ್ಯಕ್ಷ ಸಿ.ಎಚ್. ಗೌಡರ್ ನೇತೃತ್ವದಲ್ಲಿ ಒಕ್ಕೂಟದ ಸದಸ್ಯರು ಮುಳ್ಳಿನ ಪಾದರಕ್ಷೆಗಳ ಮೇಲೆ ನಿಂತು ಪ್ರತಿಭಟಿಸಿ, ಮುಖ್ಯಮಂತ್ರಿಗಳ ಗಮನ ಸೆಳೆಯಲು ನಿರ್ಧರಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಚಿಕ್ಕ ಲಾಲ್ಬಾಗ್ನಿಂದ ಮೆರವಣಿಗೆಯಲ್ಲಿ ತೆರಳುವ ಸದಸ್ಯರು ಮುಖ್ಯಮಂತ್ರಿಗಳ ಮನೆ ಮುಂದೆ ಜಮಾಯಿಸಿ, ತಾವೇ ಹೊತ್ತು ತರುವ ಮುಳ್ಳಿನ ಚಪ್ಪಲಿಗಳ ಮೇಲೆ ನಿಂತು ರಕ್ತ ಸುರಿಸಿ, ನಾಡಿನ ಜನತೆಯ ಹಾಗೂ ಸರಕಾರದ ಗಮನವನ್ನು ತಮ್ಮತ್ತ ಸೆಳೆಯುವ ಸಾಹಸ ಮಾಡುತ್ತಿದ್ದಾರೆ.
ಬಹುಶಃ ಮುಳ್ಳಿನ ಚಪ್ಪಲಿ ಪ್ರತಿಭಟನೆಗೆ ಬೆಲೆ ಬಾರದಿದ್ದರೆ, ಮುಳ್ಳಿನ ಹಾಸಿಗೆ ಮೇಲೆ ಮಲಗುವ ಕಾರ್ಯಕ್ರಮವನ್ನು ಹಾಕಿಕೊಳ್ಳುತ್ತಾರೋ ಏನೋ!