ಬೆಂಗಳೂರು ಅಭಿವೃದ್ಧಿಗೆ ‘ರಾಜಧಾನಿ ಅಭಿವೃದ್ಧಿ ನಿಧಿ’ ಯೋಜನೆ
ಬೆಂಗಳೂರು : ರಾಷ್ಟ್ರದ ನಾಲ್ಕು ಮಹಾನಗರಗಳ ಸಾಲಿನಲ್ಲಿ ಬೆಂಗಳೂರನ್ನೂ ಸೇರಿಸಲು ರಾಜಧಾನಿ ಅಭಿವೃದ್ಧಿ ನಿಧಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಮುಂದಿನ ಸಾಲಿಗೆ ಮಂಡಿಸಲಾಗಿರುವ ರಾಜ್ಯ ಬಜೆಟ್ನಲ್ಲಿ 50 ಕೋಟಿ ರುಪಾಯಿ ಒದಗಿಸಲಾಗಿದೆ.
ಬೆಂಗಳೂರು ನಗರವನ್ನು ಮಹಾನಗರದ ಸಾಲಿಗೆ ಸೇರಿಸುವ ಮೊದಲ ಪ್ರಯತ್ನವಾಗಿ ರಸ್ತೆಗಳು, ಫ್ಲೈ ಓವರ್ಗಳು, ಸುರಂಗಮಾರ್ಗಗಳನ್ನು ಕೆ.ಆರ್.ಡಿ.ಸಿ.ಎಲ್ಗೆ ವಹಿಸಲಾಗುವುದು ಎಂದು ಬಜೆಟ್ ಮಂಡನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ.
ಬೆಂಗಳೂರಿನ ನೀರಿನ ಸಮಸ್ಯೆ ನೀಗಿಸಲು, ಪರಿಸರ ರಕ್ಷಣೆಗೂ ಗಮನ ಹರಿಸಲಾಗಿದೆ. ಬೆಂಗಳೂರು ನಗರದಲ್ಲಿ ಸಂಚಾರದ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಸಂಚಾರಿ ಪೊಲೀಸರು ಸಕ್ಷಿಂಚಾರಿ ನಿಯಮ ಉಲ್ಲಂಘಿಸುವ ಚಾಲಕರಿಂದ ವಸೂಲಿ ಮಾಡುವ ದಂಡ ಶುಲ್ಕವನ್ನು ಸಂಚಾರ ಸುಧಾರಣೆಗೇ ಬಳಸಲಾಗುವುದು ಎಂದೂ ಅವರು ತಿಳಿಸಿದರು.
ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಪ್ರಸ್ತಾಪವೂ ಬಜೆಟ್ನಲ್ಲಿ ಸೇರಿದೆ. ಈ ಸಂಬಂಧ 180 ಕೋಟಿ ರುಪಾಯಿ ವೆಚ್ಚದಲ್ಲಿ 1945 ಹೊಸ ಬಸ್ಗಳನ್ನು ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿಸಲೂ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಸಂಸದರ ಅಭಿವೃದ್ಧಿ ನಿಧಿಯ ಮಾದರಿಯಲ್ಲೇ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಸ್ಥಾಪಿಸುವ ಪ್ರಸ್ತಾಪ ಆಯವ್ಯಯದಲ್ಲಿ ಬಂದಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಶಾಸಕರಿಗೂ 25 ಲಕ್ಷ ರುಪಾಯಿಗಳನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಲು ನೀಡಲು ಉದ್ದೇಶಿಸಲಾಗಿದೆ.
ನಮ್ಮ ಹೊಲ, ನಮ್ಮ ರಸ್ತೆ, ವನ ವಿಕಾಸ, ನಿರ್ಮಲ ಜ್ಯೋತಿ, ಗಿಡ ಮೂಲಿಕಾ ಔಷಧ ಪ್ರಾಧಿಕಾರ, ನವಗ್ರಾಮ ಮುಂತಾದ ಹೊಸ ಯೋಜನೆಗಳನ್ನೂ ಪ್ರಕಟಿಸಲಾಗಿದೆ. ಎಲ್ಲ ಗ್ರಾಮಗಳ ಸಂಪರ್ಕ ರಸ್ತೆ ಸುಧಾರಣೆ, ಹೊಸ ರಸ್ತೆ, ಗ್ರಾಮ ಪಂಚಾಯಿತಿಗಳಿಗೆ ಹೊಸ ಬಡಾವಣೆ ಸ್ಥಾಪಿಸಲು ಅವಕಾಶ, 15 ಲಕ್ಷ ಕೊಳಗೇರಿ ನಿವಾಸಿಗಳಿಗೆ ಅನುಕೂಲ ವಾಗುವಂತೆ ವಿದ್ಯುತ್ ದೀಪ, ಖಾಸಗಿ ಹಾಗೂ ಸಾರ್ವಜನಿಕರ ನೆರವಿನಿಂದ ಗಿಡ ಬೆಳೆಸುವ ಕಾರ್ಯಕ್ರಮಗಳು ಹೊಸ ಯೋಜನೆಯಲ್ಲಿ ಸೇರಿವೆ.
(ಇನ್ಫೋ ವರದಿ)