ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ಟು ನೋಡಬೇಕೆ?ಬ್ಲಾಕ್ನಲ್ಲಿ ಟಿಕೇಟು ಲಭ್ಯ
(ಇನ್ಫೋ ವಿಶೇಷ ವಾರ್ತೆ)
ಬೆಂಗಳೂರು : ಶುಕ್ರವಾರ ಒಂದೆಡೆ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಗಳು ಸಾವಿರ ರುಪಾಯಿಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೆ, ಮತ್ತೊಂದೆಡೆ ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ- ಭಾರತ ಒಂದು ದಿನದ ಪಂದ್ಯಕ್ಕೆ ಟಿಕೇಟುಗಳು ಬಾಯಿಗೆ ಬಂದ ಬೆಲೆಗೆ ಮಾರಾಟವಾಗಿವೆ.
ಸಿನಿಮಾ ಥಿಯೇಟರಿನ ಹೊರಗೆ ಟಿಕೇಟುಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡುವವರಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಆಸುಪಾಸಿನಲ್ಲೂ ಟಿಕೇಟು ಮಾರುವ ದಲ್ಲಾಳಿಗಳು ಶುಕ್ರವಾರ ಬೀಡು ಬಿಟ್ಟಿದ್ದರು. 500 ರುಪಾಯಿ ಟಿಕೆಟ್ಟಿಗೆ ಮೂರೂವರೆ ಸಾವಿರ ರುಪಾಯಿಯಷ್ಟು ಹೇಳುವ ದಲ್ಲಾಳಿಗಳು ಆಸಾಮಿಗೆ ತಕ್ಕಂತೆ ಚೌಕಾಶಿಗೆ ಬಗ್ಗಿದರೂ , 2 ರಿಂದ 3 ಸಾವಿರ ರುಪಾಯಿ ಕಸಿಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಇಂಡಿಯಾಇನ್ಫೋ ಪ್ರತಿನಿಧಿಗೆ ಸಿಕ್ಕ ನಾಗರಿಕರೊಬ್ಬರು, ನಾವು ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಾದೆವು. 2 ಗಂಟೆ ಟಿಕೇಟು ಮಾರಿದಂತೆ ಮಾಡಿ ಆಮೇಲೆ ಸೋಲ್ಡ್ ಔಟ್ ಬೋರ್ಡ್ ಹಾಕಿದರು. ಈಗ ಟಿಕೇಟುಗಳು ಬ್ಲಾಕ್ನಲ್ಲಿ ಖುಲ್ಲಂ ಖುಲ್ಲಾ ಬಿಕರಿಯಾಗುತ್ತಿವೆ. ದುರಂತವೆಂದರೆ ಕ್ರೀಡಾಂಗಣದ ರಿಸೆಪ್ಷನ್ ಹಾಲ್ನಲ್ಲೇ ಈ ಮಾರಾಟ ನಡೆದಿದೆ ಎಂದಿದ್ದಾರೆ.
ಮ್ಯಾಚ್ಫಿಕ್ಸಿಂಗ್ ಕರಿ ಮೋಡವನ್ನು ಹರ್ಭಜನ್ ಸಿಂಗ್ ಹಾಗೂ ವಿವಿಎಸ್ ಲಕ್ಷ್ಮಣ್ ಆಟ ಕರಗಿಸಿದೆ. ವಿಶ್ವ ಚಾಂಪಿಯನ್ನರ ವಿರುದ್ಧ ಟೆಸ್ಟ್ ಸರಣಿ ಗೆದ್ದು ಬೀಗುತ್ತಿರುವ ಭಾರತದ ಆಟಗಾರರಿಂದ ಪ್ರೇಕ್ಷಕರು ಉತ್ತಮ ಆಟ ನಿರೀಕ್ಷಿಸುತ್ತಿದ್ದಾರೆ. ಕಳೆದ ಸೋಮವಾರ (ಮಾರ್ಚ್ 19) 10 ಸಾವಿರ ಚಿಲ್ಲರೆ ಟಿಕೇಟುಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್ನಲ್ಲಿ ಎರಡೇ ಗಂಟೆಯಲ್ಲಿ ಬಿಕರಿ ಮಾಡಿ, ಜನ ರೊಚ್ಚಿಗೆದ್ದದ್ದನ್ನ ಇಲ್ಲಿ ಸ್ಮರಿಸಬಹುದು.
1996ರಲ್ಲಿ ಟಿಕೇಟು ಮಾರಾಟದ ಬಗ್ಗೆ ತನಿಖೆ ನಡೆಸುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಈಗ ದಲ್ಲಾಳಿಗಳಿಂದ ಟಿಕೇಟು ಮಾರಾಟವಾಗುತ್ತಿರುವುದೂ ಮತ್ತೆ ಯಾವುದಾದರೂ ಅವಘಡಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ. ಕರ್ನಾಟಕ ಕ್ರಿಕೆಟ್ ಒಕ್ಕೂಟದ ಅಧಿಕಾರಿಗಳ ಕಿವಿಗೆ ಇದು ಬೀಳಲಿ.
ಮುಖಪುಟ / ಇವತ್ತು... ಈ ಹೊತ್ತು...