ಪದ್ಮ ಪ್ರಶಸ್ತಿ ಸಮಾರಂಭಕ್ಕೆಬಿಸ್ಮಿಲ್ಲಾ ಖಾನ್, ದೇಜಗೌ ಆ್ಯಬ್ಸೆಂಟ್
ನವದೆಹಲಿ : ಭಾರತರತ್ನ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್, ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಕನ್ನಡ ಸಾಹಿತಿ ದೇಜಗೌ, ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಬಾಲಿವುಡ್ ನಟ ದೇವಾನಂದ್, ನಿರ್ಮಾಪಕ ಬಿ.ಆರ್.ಚೋಪ್ರಾ, ಹೊಟೇಲ್ ಉದ್ಯಮಿ ಎಂ.ಎಸ್.ಒಬೇರಾಯ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆ್ಯಬ್ಸೆಂಟ್.
ಗುರುವಾರ 55 ಗಣ್ಯರಿಗೆ ರಾಷ್ಟ್ರಪತಿ ಕೆ.ಆರ್.ನಾರಾಯಣ್ ವಿವಿಧ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಸಮಾರಂಭ ದಿಗ್ಗಜರಿಲ್ಲದೆ ಸ್ವಲ್ಪ ಕಳೆಗುಂದಿತ್ತು. ಬಿಸ್ಮಿಲ್ಲಾ ಖಾನ್ ಅವರು ಹುಷಾರಿಲ್ಲದ ಕಾರಣ ಪ್ರಶಸ್ತಿ ಸ್ವೀಕರಿಸಲು ಬರಲಾಗಲಿಲ್ಲವಂತೆ.
ಬಿಗ್ ಬಿ ಅಮಿತಾಭ್ ಬಚ್ಚನ್, ಮಲೆಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಿರ್ಮಾಪಕ ಹೃಷಿಕೇಶ್ ಮುಖರ್ಜಿ, ವಿದ್ವಾಂಸ ಕೆ.ಸಚ್ಚಿದಾನಂದ ಮೂರ್ತಿ, ಹಿರಿಯ ಅಧಿಕಾರಿ ಸಿ.ವಿ.ನರಸಿಂಹನ್, ನಾಟ್ಯ ಕಲಾವಿದರಾದ ಉಮಾ ಶರ್ಮಾ (ಕಥಕ್), ಯಾಮಿನಿ ಕೃಷ್ಣಮೂರ್ತಿ (ಭರತನಾಟ್ಯ), ಶೋಭಾ ನಾಯ್ಡು (ಕೂಚಿಪುಡಿ) ಮೊದಲಾದವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಕೃಷ್ಣಕಾಂತ್, ಪ್ರಧಾನಿ ಎ.ಬಿ.ವಾಜಪೇಯಿ, ಗೃಹ ಸಚಿವ ಎಲ್.ಕೆ.ಅಡ್ವಾಣಿ, ಕಾನೂನು ಸಚಿವ ಅರುಣ್ ಜೈಟ್ಲಿ ಮೊದಲಾದವರು ಹಾಜರಿದ್ದರು.
(ಇನ್ಫೋ ವಾರ್ತೆ)