ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆಬಹಿರಂಗ ? ನಿಮಗೆ ಸಿಕ್ಕಿದೆಯಾ ?
ಬೆಂಗಳೂರು : ಕ್ವಶ್ಚನ್ ಪೇಪರ್ ಬಹಿರಂಗ ಆಗಿದೆಯಂತೆ ನಿಜವಾ ? ನಿಮಗೆ ಪೇಪರ್ ಸಿಕ್ಕಿತಾ ? - ನಗರದಲ್ಲಿ ಇಂಥಾ ಮಾತುಗಳು ಹೆಚ್ಚಾಗುತ್ತಿವೆ. ಗುರುವಾರ ಕೂಡ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುವ ಬದಲು ಕ್ವಶ್ಚನ್ ಪೇಪರ್ಗಳ ಹುಡುಕಾಟದಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು .
ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ತಿಳಿಸುವಂತೆ ಕ್ವಶ್ಚನ್ ಪೇಪರ್ಗಳು ಬಹಿರಂಗವಾಗಿರುವುದು ನಿಜ ಹಾಗೂ ಬಹಿರಂಗಗೊಂಡ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳು ವಿದ್ಯಾರ್ಥಿಗಳ ಕೈ ಬದಲಿಸುತ್ತಿವೆ. ಇಂಗ್ಲೀಷ್, ಗಣಿತ ಹಾಗೂ ವಿಜ್ಞಾನ ಶಾಸ್ತ್ರಗಳ ಪ್ರಶ್ನೆ ಪತ್ರಿಕೆಗಳು ಮಾರುಕಟ್ಟೆಯಲ್ಲಿವೆ. ನಗರದ ಜೆ.ಸಿ. ನಗರ, ಗಂಗಾನಗರ, ಆರ್.ಟಿ. ನಗರ ಮುಂತಾದ ಬಡಾವಣೆಗಳಲ್ಲಿ ಪ್ರಶ್ನೆ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳು ದೊರೆಯುತ್ತಿವೆ.
ವಿದ್ಯಾರ್ಥಿಗಳ ಆತಂಕ : ಒಂದೆಡೆ ಕೆಲವು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸಿಕ್ಕ ಬಗೆಗೆ ಖುಷಿ ಅನುಭವಿಸುತ್ತಿದ್ದರೆ, ವರ್ಷಪೂರ್ತಿ ಪರೀಕ್ಷೆಗೆ ಸಿದ್ಧತೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ವಿದ್ಯಮಾನಗಳ ಬಗ್ಗೆ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಾರಿ ಭಾರೀ ಬಂದೋಬಸ್ತ್ ನಡುವೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕರು ಹೇಳಿದ್ದರು. ಆದರೆ, ಈಗ ನಡೆಯುತ್ತಿರೋದೆ ಬೇರೆ. ಈ ರೀತಿ ಆದ್ರೆ ಪರೀಕ್ಷೆಗೆ ಏನು ಅರ್ಥ ಇರುತ್ತೆ ಹೇಳಿ ಅನ್ನೋದವರ ಆತಂಕ.
ಕ್ವಶ್ಚನ್ ಪೇಪರ್ ಬಹಿರಂಗ ಆಗಿಲ್ಲ , ವದಂತಿಗಳಿಗೆ ಕಿವಿ ಕೊಡಬೇಡಿ
ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿದೆ ಎನ್ನುವುದು ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ವಂದತಿ. ಇಂಥಾ ಊಹಾಪೋಹಗಳಿಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಗಮನ ಕೊಡಬಾರದೆಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸ್ಪಷ್ಟಪಡಿಸಿದೆ.
ಪ್ರಶ್ನೆ ಪತ್ರಿಕೆ ಬಹಿರಂಗ ವದಂತಿಗಳ ಬಗ್ಗೆ ಮಂಡಳಿ ವಿಚಾರಣೆ ನಡೆಸಿದ್ದು , ಅದು ವದಂತಿಯೆಂಬುದು ಸ್ಪಷ್ಟವಾಗಿದೆ. ರಾಜ್ಯದ ಎಲ್ಲೆಡೆಗಳಲ್ಲೂ ಪರೀಕ್ಷೆ ಯಾವುದೇ ಅಡಚಣೆ ಇಲ್ಲದೆ ಪ್ರಾರಂಭವಾಗಿದೆ. ರಾಜ್ಯದ ಯಾವುದೇ ಭಾಗದಲ್ಲೂ ಅಹಿತಕರ ಘಟನೆಗಳು ನಡೆದಿರುವ ವರದಿಗಳು ಬಂದಿಲ್ಲ ಎಂದು ಮಂಡಳಿಯ ನಿರ್ದೇಶಕ ಎನ್.ಡಿ. ಭಟ್ ಹೇಳಿದ್ದಾರೆ.
(ಇನ್ಫೋ ವಾರ್ತೆ)