ಟಿಕೆಟ್ ಸಿಕ್ಕಿತೆ ಟಿಕೆಟ್ .. ಕಾಳಸಂತೆಯಲ್ಲಿ ಇನ್ನೂ ಲಭ್ಯವಿವೆ
ಬೆಂಗಳೂರು : ವಿಶ್ವ ಚಾಂಪಿಯನ್ನರ ವಿರುದ್ಧ ಭಾರತ ತನ್ನ ಪ್ರಾಬಲ್ಯ ಸಾಧಿಸುತ್ತಿರುವಂತೆ, ಮಾರ್ಚ್ 25 ರ ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಸೀಮಿತ ಓವರ್ಗಳ ಪಂದ್ಯದ ಟಿಕೆಟ್ಗೆ ಭಾರೀ ಬೇಡಿಕೆ ಉಂಟಾಗಿದೆ. ಜೊತೆಗೇ, ಟಿಕೆಟ್ ಹಂಚಿಕೆಯಲ್ಲಿ ತೆರೆ ಮರೆಯ ವ್ಯವಹಾರ ನಡೆಸುತ್ತಿದೆ ಎನ್ನುವ ಆರೋಪವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆ ಮತ್ತೆ ಎದುರಿಸುವಂತಾಗಿದೆ.
ಭಾನುವಾರ ರಾತ್ರಿಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ಗಳ ಬಳಿ ನೂರಾರು ಮಂದಿ ಸರತಿಗೆ ನಿಂತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅಡ್ಡಗೋಡೆಗಳನ್ನು ನಿರ್ಮಿಸಿದ್ದರು. ರಾತ್ರಿಯೆಲ್ಲ ನಿದ್ದೆಗೆಟ್ಟ ಅನೇಕ ಅಪೇಕ್ಷಿತರಿಗೆ ಸೋಮವಾರ ಬೆಳಿಗ್ಗೆ ಎದುರಾದುದ್ದು ನಿರಾಶೆ. ಟಿಕೆಟ್ ವಿತರಣೆ ಆರಂಭವಾದ ಒಂದೆರಡೇ ಗಂಟೆಗಳಲ್ಲಿ ಎಲ್ಲಾ ಕೌಂಟರ್ಗಳ ಬಳಿಯೂ ಟಿಕೆಟ್ ಲಭ್ಯವಿಲ್ಲ ಎನ್ನುವ ಫಲಕ.
ಟಿಕೆಟ್ ದೊರೆಯದ ನೂರಾರು ಅಭಿಮಾನಿಗಳು ರೊಚ್ಚಿಗೆದ್ದು , ಕ್ರಿಕೆಟ್ ಸಂಸ್ಥೆಯನ್ನು ದೂಷಿಸಿದ್ದೂ ಆಯಿತು. ಆದರೆ, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ನಿಯೋಜಿತರಾಗಿದ್ದುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ .
ನಾವು ಪಾರದರ್ಶಕವಾಗಿದ್ದೇವೆ : ಟಿಕೆಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳನ್ನು ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ತಳ್ಳಿಹಾಕಿದ್ದಾರೆ. ಮಾರಾಟಕ್ಕೆ ಇದ್ದುದು ಕೇವಲ 10 ಸಾವಿರದ 500 ಟಿಕೆಟ್ಗಳು ಮಾತ್ರ. ಟಿಕೆಟ್ ಮಾರಾಟ ಸುಮಾರು 3 ಗಂಟೆಗಳ ಕಾಲ ನಡೆಯಿತು. ಮಹಿಳೆಯರಿಗೆ ಮೀಸಲಾದ ಟಿಕೆಟ್ಗಳು ಇನ್ನೂ ಉಳಿದಿವೆ ಎಂದವರು ಸ್ಪಷ್ಟನೆ ನೀಡಿದರು.
ಒಟ್ಟು ಲಭ್ಯವಿರುವ 30 ಸಾವಿರ ಟಿಕೆಟ್ಗಳಲ್ಲಿ ಕೆಎಸ್ಸಿಎ ಸದಸ್ಯರಿಗೆ 8 ಸಾವಿರ, ಜಿಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ 8 ಸಾವಿರ, ಕ್ರಿಕೆಟ್ ಕ್ಲಬ್ಗಳಿಗೆ 6 ಸಾವಿರ, ಇತರ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 1 ಸಾವಿರ ಹಾಗೂ ಪ್ರಾಯೋಜಕರಿಗೆ 500 ಟಿಕೆಟ್ಗಳನ್ನು ನೀಡಲಾಗಿದೆ ಎಂದು ಬ್ರಿಜೇಶ್ ಸ್ಪಷ್ಟಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...