ಪ್ರಭುದೇವ್ ನೇಮಕಕ್ಕೆ ಸುಪ್ರಿಂಕೋರ್ಟ್ ಸೀಲು, ರಾಜಕಾರಣಕ್ಕೆ ಸೋಲು
ಬೆಂಗಳೂರು : ಸೇವೆಯಿಂದ ನಿವೃತ್ತವಾಗುವವರೆಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಡಾ. ಪ್ರಭುದೇವ್ ಅವರನ್ನು ನೇಮಿಸಿದ್ದ ಜೆ.ಎಚ್. ಪಟೇಲ್ ಸರ್ಕಾರದ ನಿರ್ಣಯವನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದಿದೆ. ಇದರಿಂದಾಗಿ ಪ್ರಭುದೇವ್ ಅವರ ನೇಮಕವನ್ನು ಪ್ರಶ್ನಿಸಿದ್ದ ಕೆಲವು ವೈದ್ಯರಿಗೆ ಹಾಗೂ ಅವರ ಒತ್ತಡಕ್ಕೆ ಮಣಿದಿದ್ದ ಕೃಷ್ಣ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.
ಸುಪ್ರಿಂಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಜಂಟಿ ನ್ಯಾಯಪೀಠ ಸೋಮವಾರ ಈ ಮಹತ್ವದ ತೀರ್ಮಾನವನ್ನು ನೀಡಿತು. ಇದಕ್ಕೆ ಮುನ್ನ ನವಂಬರ್ 3 ರಂದು ರಾಜ್ಯ ಹೈಕೋರ್ಟ್ನ ವಿಭಾಗೀಯ ಪೀಠ ಕೂಡ ಪ್ರಭುದೇವ್ ಅವರ ನೇಮಕವನ್ನು ಸಮರ್ಥಿಸಿತ್ತು . ಆದರೆ, ಡಾ. ಬಿ. ಕುಮಾರ್, ಡಾ. ಕೆ.ಎಸ್. ಭೂಪಾಲ ಹಾಗೂ ಡಾ. ಸಿ.ಎನ್. ಮಂಜುನಾಥ್ ಅವರುಗಳು ವಿಭಾಗೀಯ ಪೀಠದ ನಿರ್ಧಾರವನ್ನು ಸುಪ್ರಿಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
1996 ರಲ್ಲಿ ಜಯದೇವ ಹೃದ್ರೋಗ ಸಂಸ್ಥೆಗೆ ಮೂರು ವರ್ಷಗಳ ಕಾಲ ನಿರ್ದೇಶಕರಾಗಿ ನೇಮಕಗೊಂಡಿದ್ದ ಪ್ರಭುದೇವ್ ಅವರನ್ನು, 1997 ರಲ್ಲಿ ನಿವೃತ್ತಿಯವರೆಗೆ ನಿರ್ದೇಶಕರನ್ನಾಗಿ ಮುಂದುವರಿಸಲಾಗಿತ್ತು . ಇದರಿಂದಾಗಿ ರೊಚ್ಚಿಗೆದ್ದ ಆಸ್ಪತ್ರೆಯ ಕೆಲವು ವೈದ್ಯರು ಪ್ರಭುದೇವ್ ಅವರ ಪದಚ್ಯುತಿಗೆ ಸತತ ಪ್ರಯತ್ನಗಳನ್ನು ನಡೆಸಿದ್ದರು. ತಮ್ಮ ಅಳಿಯ ಡಾ. ಮಂಜುನಾಥ್ ಅವರನ್ನು ನಿರ್ದೇಶಕ ಹುದ್ದೆಗೆ ತರಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಯತ್ನಿಸುತ್ತಿದ್ದಾರೆನ್ನುವ ಮಾತುಗಳೂ ಕೇಳಿ ಬಂದಿದ್ದವು. ಪ್ರಸ್ತುತ ಸುಪ್ರಿಂಕೋರ್ಟ್ ತೀರ್ಮಾನದಿಂದಾಗಿ ಪ್ರಭುದೇವ್ ನಿರ್ದೇಶಕರಾಗಿ ಮುಂದುವರಿಯುವುದು ಖಚಿತವಾಗಿದೆ.
(ಇನ್ಫೋ ವಾರ್ತೆ)