ಮಾವಿಗೆ ಮಂಜು ಮುಸುಕಿತು , ಸಮೃದ್ಧ ಬೆಳೆ ನಿರೀಕ್ಷೆ ಹುಸಿಯಾಯ್ತು
ಬೆಂಗಳೂರು : ಈ ಬಾರಿ ಮಾವಿನ ಫಸಲು ಸಾಕುಬೇಕಾದಷ್ಟು ಬರುತ್ತದೆ ಎಂದು ಕೃಷಿ ತಜ್ಞರು ಲೆಕ್ಕಹಾಕಿದ್ದರು. ಅದಕ್ಕೆ ತಕ್ಕಂತೆ ಜನವರಿ, ಫೆಬ್ರವರಿಯಲ್ಲೇ ರಾಜ್ಯದ ಎಲ್ಲ ಮಾವಿನ ಮರಗಳಲ್ಲಿ ಹೂ ಕಾಣಿಸಿಕೊಂಡಿತು, ಹೂವು ಕಾಯಿಯೂ ಆಗುತ್ತಿತ್ತು. ಎಲ್ಲ ಮರಗಳಲ್ಲಿಯೂ ಮಾವಿನಕಾಯಿಯ ಹೀಚು ಮೂಡಿತ್ತು. ಇದನ್ನು ಕಂಡಾಗ ಈ ಬಾರಿ ಕಳೆದ ವರ್ಷಕ್ಕಿಂತಲೂ ಮೂರು ಪಟ್ಟು ಮಾವಿನಹಣ್ಣು ಮಾರುಕಟ್ಟೆಗೆ ಬರುತ್ತದೆ ಎಂದು ನೀರೀಕ್ಷಿಸಲಾಗಿತ್ತು.
ಆದರೆ, ಫೆಬ್ರವರಿ ಕೊನೆಯಲ್ಲಿ ಸುರಿದ ಮಂಜು ಈ ಎಲ್ಲ ನಿರೀಕ್ಷೆಗಳನ್ನೂ ಮಸುಕಾಗಿಸಿತು. ಮಂಜು ಸುರಿದ ಪರಿಣಾಮವಾಗಿ ಮಾವಿನ ಮರದಲ್ಲಿ ಬಿಟ್ಟಿದ್ದ ಹೂ ಉದುರಿದವು, ಹೂವಿನ ಹಂತ ದಾಟಿ ಹೀಚಾಗಿದ್ದ ಚಿಕ್ಕಚಿಕ್ಕ ಕಾಯಿಗಳೂ ಉದುರಿದವು. ರೈತನ ಎಲ್ಲ ನಿರೀಕ್ಷಿಯೂ ಮಂಜಿನಿಂದ ಮಬ್ಬಾಗಿ ಹೋಯಿತು.
ಆದರೂ, ಚೈತ್ರದ ಆರಂಭಕ್ಕೆ ನಾಲ್ಕಾರು ದಿನ ಇರುವಾಗಲೇ ಮಾರುಕಟ್ಟೆಯಲ್ಲಿ ಉಪ್ಪಿನಕಾಯಿಗೆ ಮಾವಿನ ಕಾಯಿ ಲಭಿಸುತ್ತಿದೆ. ಹಿಂದಿನ ಲೆಕ್ಕಾಚಾರದಂತೆ, ಯಥೇಚ್ಛವಾಗಿ ಮಾರುಕಟ್ಟೆ ಪ್ರವೇಶಿಸಬೇಕಿದ್ದಷ್ಟು ಮಾವು ಬಂದಿಲ್ಲ. ಮಾವಿನ ಹಣ್ಣು ಕೂಡ ಮೂರ್ಪಟ್ಟು, ನಾಲ್ಕು ಪಟ್ಟು ಬರುವ ಸಾಧ್ಯತೆ ಕ್ಷೀಣಿಸಿದೆ. ಆದರೂ ಕಳೆದ ವರ್ಷ ಮಾರುಕಟ್ಟೆಗೆ ಬಂದಿದ್ದ ಮಾವಿನ ಪ್ರಮಾಣಕ್ಕಿಂತ ತುಸು ಹೆಚ್ಚಾಗೇ ಬರಲಿದೆ.
ಬೆಲೆ ಹಾಗೂ ಬೆಳೆ ಕೈಕೊಟ್ಟು, ರೈತ ಈಗಾಗಲೇ ಕೃಶವಾಗಿದ್ದಾನೆ. ಮೆಕ್ಕೇಜೋಳ, ಆಲುಗೆಡ್ಡೆ ನೀಡದ ಬೆಲೆಯನ್ನು ಮಾವಾದರೂ ನೀಡಿತು ಎಂದು ಕೊಂಡಿದ್ದ ರೈತ ಮತ್ತೆ ಕಂಗಾಲಾಗಿದ್ದಾನೆ. ರಾಜ್ಯದ ನೆಚ್ಚಿನ ಮಾವಿನ ಬೆಳೆಯಾದ ಮಲ್ಲಿಕಾ ಕೂಡ ಮಂಜಿನ ದಾಳಿಗೆ ಒಳಗಾಗಿದೆ. ಹಾಸನ, ಶ್ರೀನಿವಾಸಪುರಗಳ ಮಾವಿನ ತೋಟದ ಮಾಲಿಕರು ಜೋರು ಗಾಳಿ ಬಂದರೆ, ಹೂವು, ಹೀಚು ಉದುರುತ್ತದೆ ಎಂದು ಆತಂಕಗೊಂಡಿದ್ದರು. ಆದರೆ, ಬಿರುಗಾಳಿ ಏಳಲಿಲ್ಲ. ಮುಂಜಾನೆ ಸುರಿದ ಮಂಜು, ರೈತರ ಪಾಲಿಗೆ ಬಿರುಗಾಳಿಯೇ ಆಯಿತು.
ಈಗ ಸರಕಾರ ಮುಂಜಾಗ್ರತಾ ಕ್ರಮ ಕೈಗೊಂಡು, ಈಗಲೇ ಮಾವಿಗೆ ಬೆಂಬಲ ಬೆಲೆ ಘೋಷಿಸದಿದ್ದರೆ, ಮಾವಿನ ರೈತನ ಪಾಡೂ ಮೆಕ್ಕೆ ಜೋಳ ಬೆಳೆದ ರೈತನ ಸ್ಥಿತಿಗೆ ಭಿನ್ನವಾಗಿರುವುದಿಲ್ಲ ಎನ್ನುತ್ತಿದ್ದಾರೆ ಕೃಷಿ ಮಾರುಕಟ್ಟೆ ತಜ್ಞರು.
ಮುಖಪುಟ / ಇವತ್ತು... ಈ ಹೊತ್ತು...