ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಮುಖ್ಯ ನ್ಯಾಯಾಧೀಶರ ನಕಾರ
ನವದೆಹಲಿ : ತೆಹಲ್ಕಾ ಡಾಟ್ ಕಾಂ ವರದಿಯ ಸುರುಳಿಗಳ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಲು ಹಾಲಿ ನ್ಯಾಯಾಧೀಶರೊಬ್ಬರನ್ನು ನೇಮಿಸುವಂತೆ ವಾಜಪೇಯಿ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಆನಂದ್ ತಿರಸ್ಕರಿಸಿದ್ದಾರೆ.
ಸರ್ಕಾರದಿಂದ ಮನವಿ ಪತ್ರ ಪಡೆದ ನಂತರ ತಮ್ಮ ಸಹೋದ್ಯೋಗಿಗಳೊಡನೆ ಈ ಬಗ್ಗೆ ಸಂವಾದ ನಡೆಸಿದ ಆನಂದ್ ಈ ತೀರ್ಮಾನಕ್ಕೆ ಬಂದಿದ್ದಾರೆ. ಸಂವಾದದಲ್ಲಿ ಭಾಗವಹಿಸಿದ್ದ ಎಲ್ಲಾ ನ್ಯಾಯಮೂರ್ತಿಗಳು ಅಪೆಕ್ಸ್ ಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರನ್ನು ಇಂಥಾ ಪ್ರಕರಣದ ತನಿಖೆಗೆ ನಿಯೋಜಿಸುವುದು ಉಚಿತವಲ್ಲ ಎಂಬ ಒಟ್ಟಾರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಿರ್ಧಾರವನ್ನು ಪತ್ರದ ಮೂಲಕ ಕಾನೂನು ಸಚಿವಾಲಯಕ್ಕೆ ಆನಂದ್ ಈಗಾಗಲೇ ಕಳುಹಿಸಿದ್ದಾರೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ. ಈ ಪತ್ರಕ್ಕೆ ಸರ್ಕಾರ ಪ್ರತಿಕ್ರಿಯಿಸಿದ ನಂತರ ಒಬ್ಬ ನಿವೃತ್ತ ನ್ಯಾಯಾಧೀಶರ ಏಕ ಸದಸ್ಯ ಸಮಿತಿಯನ್ನು ರಚಿಸುವ ಕುರಿತು ಆನಂದ್ ಪರಿಶೀಲಿಸಲಿದ್ದಾರೆ. ಈ ಮೊದಲು ಮಾರ್ಚ್ 16ರಂದು ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟ ಕರ್ತವ್ಯ ನಿರತ ನ್ಯಾಯಾಧೀಶರೊಬ್ಬರಿಂದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಈ ಕುರಿತಾದ ತನಿಖೆಯನ್ನು 4 ತಿಂಗಳಲ್ಲಿ ಪೂರೈಸುವಂತೆ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಕೋರಿತ್ತು .
(ಪಿಟಿಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...