ರಾಜಕೀಯ ಕಾವಿನ ಜತೆ, ಬಿಸಿಲಿನ ಕಾವೂ ಏರಿದೆ
ಬೆಂಗಳೂರು : ಮೂರ್ನಾಲ್ಕು ದಿನ ಭಾಗಶಃ ಮೋಡ ಮುಸುಕಿದ್ದ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬಿಸಿಲು ಚುರುಗುಟ್ಟುತ್ತಿತ್ತು. ಎ.ಐ.ಸಿ.ಸಿ. ಮಹಾಧಿವೇಶನದ ಬಿಸಿ, ತೆಹೆಲ್ಕಾ ಡಾಟ್ ಕಾಂ ಹಗರಣದಿಂದ ಉಂಟಾಗಿರುವ ರಾಜಕೀಯ ಬಿಸಿ ಬಹುಶಃ ಸೂರ್ಯನಿಗೂ ತಟ್ಟಿರಬೇಕು.
ರಾಜ್ಯದಲ್ಲಿ ಕೂಡ ತಾಪಮಾನ ಕೊಂಚ ಹೆಚ್ಚಿದೆ. ಗರಿಷ್ಠ ತಾಪಮಾನ ರಾಜ್ಯದ ಅನೇಕ ಕಡೆ ಏರಿದೆ. ಕನಿಷ್ಠ ತಾಪಮಾನ ಉತ್ತರ ಒಳನಾಡಿನಲ್ಲಿ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅದು ಸಾಮಾನ್ಯ ವಾಗಿತ್ತು.
ರಾಜ್ಯದ ಅತಿ ಹೆಚ್ಚು ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಗುಲ್ಬರ್ಗಾದಲ್ಲೂ, ಅತಿ ಕಡಿಮೆ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಶಿವಮೊಗ್ಗದಲ್ಲೂ ದಾಖಲಾಗಿತ್ತು. ಹವಾಮಾನ ವೀಕ್ಷಣಾಲಯ ನೀಡಿರುವ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ನಿರ್ಮಲ ಆಕಾಶ ಇದ್ದು, ಹಗಲಿನ ಗರಿಷ್ಠ ಉಷ್ಣಾಂಶ 34 ಡಿಗ್ರಿ ಹಾಗೂ ರಾತ್ರಿಯ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯದಲ್ಲಿ ಎಂದಿನಂತೆ ಒಣಹವೆ ಮುಂದುವರಿಯುವ ಸೂಚನೆ ಇದೆ.