ಕರ್ನಾಟಕದಲ್ಲಿ ತಂತ್ರಜ್ಞಾನದ ಸದ್ಬಳಕೆ ಆಗುತ್ತಿದೆ:ಎಸ್.ಎಂ. ಕೃಷ್ಣ
ಬೆಂಗಳೂರು (ರಾಜೀವಗಾಂಧಿ ನಗರ) : ದಿವಂಗತ ಪ್ರಧಾನಿ ರಾಜೀವ್ಗಾಂಧಿ ಅವರ ಕನಸಾಗಿದ್ದ ತಂತ್ರಜ್ಞಾನವನ್ನು ಸಾಮಾಜಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಾಗಿದೆ. ಈ ಮೂಲಕ ಆಡಳಿತ ಸಂಪೂರ್ಣ ಪಾರದರ್ಶಕವಾಗಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ 81ನೇ ಕಾಂಗ್ರೆಸ್ ಮಹಾಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು, ಸಾಮಾಜಿಕ ಬದ್ಧತೆಯಿಂದ ಜನಪರ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದೊಂದಿಗೆ, ಕನ್ನಡ ನಾಡಿನ ಜನತೆಗೆ ಸಕಲ ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗಿದೆ ಎಂದರು.
ರಾಜ್ಯದಲ್ಲಿ ಮಾಹಿತಿ - ತಂತ್ರಜ್ಞಾನವಷ್ಟೇ ಅಲ್ಲದೆ ಜೈವಿಕ ತಂತ್ರಜ್ಞಾನಕ್ಕೂ ಆದ್ಯತೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಒಳಚರಂಡಿ ಹಾಗೂ ನಿರ್ಮಲೀಕರಣಕ್ಕೆ ಒತ್ತು ನೀಡಲಾಗಿದ್ದು, ತಮ್ಮ ಸರಕಾರ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಜಲಸಂವರ್ಧನೆ, ಕಂದಾಯ ಇಲಾಖೆ ದಾಖಲೆಗಳ ಕಂಪ್ಯೂಟರೀಕರಣ ಮಾಡಲಾಗಿದೆ ಎಂದೂ ಕೃಷ್ಣ ತಮ್ಮ ಸರಕಾರದ ಸಾಧನೆಗಳನ್ನು ಕಾಂಗ್ರೆಸ್ ಮಹಾಧಿವೇಶನದಲ್ಲಿ ವಿವರಿಸಿದರು.
ಕರ್ನಾಟಕವು ಚಾಲುಕ್ಯ, ಕದಂಬ, ಹೊಯ್ಸಳ, ಗಂಗರು, ವಿಜಯನಗರ ದೊರೆಗಳಾಳಿದ ಸಿರಿವಂತ ನಾಡು, ಕ್ರಾಂತಿಕಾರಿ ಬಸವಣ್ಣನವರಂತಹ ಮಹಾಮಹಿಮರು ಹುಟ್ಟಿದ ಬೀಡು, ರಾಷ್ಟ್ರದ ಹೆಮ್ಮೆಯ ವಿಜ್ಞಾನಿ ಸರ್.ಎಂ. ವಿಶ್ವೇಶ್ವರಯ್ಯನವರು ಹುಟ್ಟಿದ ನೆಲವೀಡು ಎಂದ ಕೃಷ್ಣ ಇಂದೂ ಕೂಡ ನಮ್ಮ ನಾಡಿನ ಎಂಜಿನಿಯರುಗಳು ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಗಿದ್ದಾರೆ ಎಂದು ಕೊಂಡಾಡಿದರು.
ದೇಶದ ಮುಕ್ತಿಗೆ ಹೋರಾಡಿ : ಪ್ರಧಾನಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರ ದೇಶವನ್ನು ಭ್ರಷ್ಟಾಚಾರ ಮತ್ತು ಜಾತಿಯ ಸಂಕೋಲೆಯಿಂದ ಬಂಧಿಸಿದೆ. ಈ ಬಂಧನದಿಂದ ದೇಶವನ್ನು ಬಿಡುಗಡೆಗೊಳಿಸಲು ಹೋರಾಟ ಮಾಡುವುದು ಅನಿವಾರ್ಯ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿರುವ ಮಂದಿ ಹಣಕ್ಕಾಗಿ ದೇಶದ ರಕ್ಷಣೆ, ರಹಸ್ಯ ಹಾಗೂ ತಮ್ಮನ್ನು ತಾವೇ ಮಾರಿಕೊಳ್ಳುತ್ತಿದ್ದಾರೆ. ಇದಕ್ಕೆ ಕ್ಷಮೆಯೇ ಇಲ್ಲ. ಇಂತಹ ಕುರೂಪಿಗಳ ಮುಖವಾಡ ಹರಿಯಲೇ ಬೇಕಾಗಿದೆ ಎಂದು ಆವೇಶಭರಿತರಾಗಿ ಹೇಳಿದರು. ರಾಷ್ಟ್ರದ ರಕ್ಷಣೆಗಾಗಿ ಕಾಂಗ್ರೆಸ್ ಪ್ರಾದೇಶಿಕ ಮಟ್ಟದಲ್ಲೂ ಜಾತ್ಯತೀತ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ಧ ಎಂಬ ಸುಳಿವನ್ನೂ ಅವರು ನೀಡಿದರು.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...