ಹೇಳುವುದು ಒಂದು, ಮಾಡುವುದು ಮತ್ತೊಂದು.. ಎಲ್ಲಾ ಪ್ಲಾಸ್ಟಿಕ್ಮಯ
ಗಳೂರು : ಬೆಂಗಳೂರು ಅರಮನೆ ಆವರಣದಲ್ಲಿ ನಡೆದಿದೆ ಎಐಸಿಸಿ ಜನಜಾತ್ರೆ. ಈ ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸುವುದಿಲ್ಲ. ಪರಿಸರ ಹಾಳು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣರಿಂದ ವಾಗ್ದಾನ. ಪ್ಲಾಸ್ಟಿಕ್ ಬಳಸದಂತೆ ಸೋನಿಯಾರಿಂದಲೂ ಪೂರ್ವಾದೇಶ.
ಆದರೆ, ಇಲ್ಲಿ ನಡೆದದ್ದೇ ಬೇರೆ. ಹೇಳುವುದು ಒಂದು, ಮಾಡುವುದು ಮತ್ತೊಂದು ಎಂಬಂತೆ, ಅರಮನೆ ಆವರಣವೆಲ್ಲಾ ತಿಂದು, ಕುಡಿದು, ಮುದುರಿ ಎಸೆದ ಪ್ಲಾಸ್ಟಿಕ್ ಲೋಟ, ತಟ್ಟೆ, ಬಾಟಲಿಗಳಿಂದ ತುಂಬಿದೆ. ಸಹಸ್ರಾರು ಸಂಖ್ಯೆಯಲ್ಲಿರುವ ಈ ಪ್ಲಾಸ್ಟಿಕ್ ಆಯಲು ಚಿಂದಿ ಆಯುವ ಹುಡುಗರು ಗುಂಪು ಗುಂಪಾಗಿ ಬಂದಿದ್ದಾರೆ. ಪೊಲೀಸರು ರಕ್ಷಣೆಯ ಜತೆಗೆ ಚಿಂದಿ ಆಯುವ ಹುಡುಗರನ್ನು, ನಾಯಿಗಳನ್ನು ಓಡಿಸುವ ಕಾಯಕದಲ್ಲೂ ತೊಡಗಿದ್ದಾರೆ.
ಶನಿವಾರ ಬೆಳಗ್ಗಿನಿಂದಲೂ ನೀರು ಕುಡಿಯಲು, ಕಾಫಿ, ಟೀ ನೀಡುವಾಗಲೆಲ್ಲಾ ಪ್ಲಾಸ್ಟಿಕ್ ಲೋಟಗಳೇ ಮೆರೆದವು. ಊಟದ ಸಂದರ್ಭದಲ್ಲಿ ಫ್ರುಟ್ ಸಲಾಡ್, ಐಸ್ ಕ್ರೀಂ ನೀಡಿದ್ದೂ ಪ್ಲಾಸ್ಟಿಕ್ ಕಪ್ಗಳಲ್ಲೇ. ಊಟಕ್ಕಾಗಿ ನೂಕು ನುಗ್ಗಲು. ಫೈವ್ ಸ್ಟಾರ್ ಹೋಟೆಲ್ಗಳನ್ನೂ ಮೀರಿಸುವಂತಿದ್ದ ಭೂರಿ ಭೂಜನ. ತಿಂದುಂಡವರು, ಮೂಲೆಗಳಲ್ಲಿದ್ದ ಕಸದ ತೊಟ್ಟಿ ನೋಡಲೇ ಇಲ್ಲ. ಎಲ್ಲ ಪ್ಲಾಸ್ಟಿಕ್ ಲೋಟಗಳು, ತಟ್ಟೆಗಳು ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದು ಒದ್ದಾಡುತ್ತಿದ್ದವು. ರಾಜೀವಗಾಂಧಿ ನಗರದ ತುಂಬಾ ಪ್ಲಾಸ್ಟಿಕ್ ಬಂಟಿಂಗ್ಸ್ಗಳೇ ರಾರಾಜಿಸುತ್ತಿದ್ದವು.
ಅಡುಗೆ ಮನೆಗೆ ಹೋಗೋಣ : ಅಡುಗೆ ಮನೆಯಲ್ಲಂತೂ ಬೆಳಗ್ಗೆ ತಿಂಡಿಗೆ ಇಡ್ಲಿ, ಖಾರಾಬಾತ್, ಪೊಂಗಲ್, ದೋಸೆ, ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬರ್, ಚಪಾತಿ, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಪರೋಟ, ಗೀ ರೈಸ್, ಗೋಬಿ ಮಂಚೂರಿ, ಮೊಸರನ್ನ. ಊಟದ ನಂತರ ಫ್ರುಟ್ ಸಲಾಡ್, ಬಗೆ ಬಗೆಯ ಐಸ್ ಕ್ರೀಮ್, ಸಂಜೆಯ ಸ್ನ್ಯಾಕ್ಸ್ಗೆ ಬೋಂಡ. ಗಾಂಧೀ ಬಜಾರ್ನ ಅಡುಗೆ ಕಾಂಟ್ರಾಕ್ಟರ್ ಮಂಜುನಾಥ್ ಅವರ ತಂಡದ ಸುಮಾರು 400 ಆಡುಗೆಯವರು ದೇಶದ ನಾನಾ ಭಾಗದಿಂದ ಬಂದಿರುವ ಕಾಂಗ್ರೆಸಿಗರು ಹೊಟ್ಟೆ ತುಂಬಿಸಲು ರುಚಿ ರುಚಿಯ ಭಕ್ಷ್ಯ ತಯಾರಿಕೆಯಲ್ಲಿ ನಿರತರಾಗಿದ್ದಾರೆ.
ದಕ್ಷಿಣ ಭಾರತದ ಚಿತ್ರಾನ್ನ, ಪಲಾವ್, ಕುರ್ಮಾ, ಡ್ರೆೃ ವೆಜಿಟಬಲ್, ಉತ್ತರ ಭಾರತದ ಮಸಾಲೆ ಪೂರಿ, ರೋಟಿ, ನಾನ್, ಪರೋಟ, ಚಪಾತಿ, ಕುಡಿಯಲು ಮಿನರಲ್ ವಾಟರ್. ಇಷ್ಟೆಲ್ಲಾ ಇದ್ದ ಮೇಲೆ ಸಿಹಿ ಬೇಡವೇ ಅದಕ್ಕಾಗೇ ಮೈಸೂರು ಪಾಕ್, ಗೋಡಂಬಿ ಬರ್ಫಿ. ಊಟಕ್ಕೆ ಎಂಟಿಆರ್ ಉಪ್ಪಿನ ಕಾಯಿ, ಊಟಾ ನಂತರ ವಿವಿಧ ಬಗೆಯ ಹಣ್ಣು.
ಒಟ್ಟಿನಲ್ಲಿ ಎಲ್ಲವೂ ರಾಜ ವೈಭವ. ಹೊರ ರಾಜ್ಯದಿಂದ ಬಂದವುರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಏರ್ಪಾಟು. ಈ 81ನೇ ಮಹಾಧಿವೇಶನಕ್ಕೆ ಖರ್ಚಾದ ಹಣ ಎಷ್ಟು ಎಂದು ಮಾತ್ರ ಕೇಳಬೇಡಿ. ಉತ್ತರ ಕೊಡುವುದು ನಮಗೂ ಕಷ್ಟ. ಹೊರ ರಾಜ್ಯದಿಂದ ಬಂದಿರುವ ಪ್ರತಿನಿಧಿಗಳು ಮಾತಾಡಿಕೊಳ್ಳುತ್ತಿರುವ ಮಾತು ಕತೆಗಳ ಪ್ರಕಾರ ಹತ್ತಿರ ಹತ್ತಿರ 5ಕೋಟಿ, ಆರು ಕೋಟಿ ಇಲ್ಲ ಇಲ್ಲ ಕಡಿಮೆ ಎಂದರೂ 10 ಕೋಟಿ ಖರ್ಚಾಗಿದೆ. ಲೆಕ್ಕ ಇಟ್ಟವರಾರು ಹೇಳಿ.