ಕಂದಾಯದ ಬದಲು ಲಂಚ ವಸೂಲಿ ಮಾಡುತ್ತಿದ್ದರು ಅವರು ..
ಬೆಂಗಳೂರು : ತೆರಿಗೆ ವಸೂಲಿ ಮಾಡುವ ಬದಲು ಲಂಚ ವಸೂಲಿ ಮಾಡುತ್ತಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಹಿರಿಯ ಕಂದಾಯ ಅಧಿಕಾರಿ ಎಲ್. ಶ್ರೀನಿವಾಸಯ್ಯ ಹಾಗೂ ಪಟ್ಟಣಗೆರೆ ಪುರಸಭೆಯ ಕಂದಾಯ ಅಧಿಕಾರಿ ಕೆ. ಗೋಪಾಲಯ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಸುಮಾರು ಮೂರು ಕೋಟಿ ರುಪಾಯಿಗೂ ಮೀರಿದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ಮಹಾ ನಗರ ಪಾಲಿಕೆಯ ಕ್ವೀನ್ಸ್ ರಸ್ತೆಯ ತಿಮ್ಮಯ್ಯ ಕ್ರಾಸ್ ರೋಡ್ನಲ್ಲಿರುವ ಈಶಾನ್ಯ ವಲಯ ಕಚೇರಿಯಲ್ಲಿ ಹಿರಿಯ ಕಂದಾಯ ಅಧಿಕಾರಿ ಆಗಿರುವ ಎಲ್. ಶ್ರೀನಿವಾಸಯ್ಯ ಅವರ ಮನೆ, ತೋಟದ ಮನೆ, ಹಾಗೂ ಕಚೇರಿಗಳ ಮೇಲೆ ಏಕ ಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಸುಮಾರು 2 ಕೋಟಿ ರುಪಾಯಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಇವರ ಮೇಲೆ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದಾರೆಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶ್ರೀನಿವಾಸಯ್ಯ ಪದ್ಮನಾಭನಗರದಲ್ಲಿ ನಿವೇಶನ, ಭವ್ಯ ಬಂಗಲೇ, ದಕ್ಷಿಣ ತಾಲೂಕಿನಲ್ಲಿ ತೋಟದ ಮನೆ, ಎಕರೆಗಟ್ಟಲೆ ಜಮೀನು, ಕೆಜಿಗಟ್ಟಲೇ ಚಿನ್ನಾಭರಣ, ಕಾರು, ಸುಖಭೋಗದ ವಸ್ತುಗಳು, ರಾಜಾಜಿನಗರದಲ್ಲಿ ವಾಣಿಜ್ಯ ಸಂಕೀರ್ಣವೇ ಮೊದಲಾದ ಆಸ್ತಿ ಹೊಂದಿದ್ದಾರೆ ಎಂಬುದು ಈ ದಾಳಿಯಿಂದ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣಗೆರೆ ಪುರಸಭೆಯಲ್ಲಿ ಕಂದಾಯ ಅಧಿಕಾರಿ ಆಗಿರುವ ಕೆ. ಗೋಪಾಲಯ್ಯ ಅವರು ಕೂಡ ಸುಮಾರು ಒಂದೂವರೆ ಕೋಟಿ ರುಪಾಯಿಗಳಷ್ಟು ಮೌಲ್ಯದ ಆದಾಯಕ್ಕೂ ಮೀರಿದ ಆಸ್ತಿ ಮಾಡಿರುವುದು ಲೋಕಾಯುಕ್ತ ದಾಳಿಯಿಂದ ಹೊರಬಿದ್ದಿದೆ.
ಬೆಂಗಳೂರಿನ ಜೆ.ಪಿ. ನಗರದ ಗೋಪಾಲಯ್ಯ ಅವರ ಮನೆ, ಕಚೇರಿ ಮತ್ತು ಅವರ ಮಾವನ ಮನೆಯ ಮೇಲೆ ಮೂರೂ ಸ್ಥಳಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಗೋಪಾಲಯ್ಯ ಬೆಂಗಳೂರಿನ ಹಲವೆಡೆ ನಿವೇಶನ, ವಾಣಿಜ್ಯ ಸಂಕೀರ್ಣ, ಭವ್ಯ ಬಂಗಲೆ, ಸ್ವಂತ ಊರಿನಲ್ಲಿ 3 ದೊಡ್ಡ ಮನೆ, 10 ಎಕರೆ ಜಮೀನು, ಚಿನ್ನಾ ಬೆಳ್ಳಿಯ ಆಭರಣ ಹೊಂದಿರುವುದು ದಾಳಿಯಿಂದ ಗೊತ್ತಾಗಿದೆ.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಜಿ. ರಮೇಶ್ ಅವರ ನೇತೃತ್ವದಲ್ಲಿ ಈ ಇಬ್ಬರು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
(ಇನ್ಫೊ ವಾರ್ತೆ)