ನಗರದ ಎಲ್ಲ ಹೋಟೆಲ್ಗಳಲ್ಲಿ ಬಿಸಿನೀರು ನೀಡಲು ಆದೇಶ
ಬೆಂಗಳೂರು : ಬೆಂಗಳೂರು ನಗರದಲ್ಲಿ ಕರುಳುಬೇನೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್ಗಳಲ್ಲಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಬಿಸಿನೀರು ಕೊಡುವಂತೆ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಆದೇಶ ನೀಡಿದೆ.
ನಗರದ ಎಲ್ಲ ಹೋಟೆಲ್ಗಳಲ್ಲಿ ಬಿಸಿನೀರು ದೊರೆಯುತ್ತದೆ ಎಂಬ ಫಲಕ ಹಾಕಬೇಕು ಹಾಗೂ ಬಿಸಿನೀರನ್ನೇ ಸರಬರಾಜು ಮಾಡಬೇಕು. ಇಲ್ಲವಾದಲ್ಲಿ ಅಂತಹ ಹೋಟೆಲ್ಗಳನ್ನು ಮುಚ್ಚಲಾಗುವುದು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್. ಶಿವಪ್ಪ ಎಚ್ಚರಿಕೆಯನ್ನು ನೀಡಿದ್ದಾರೆ.
ಸ್ಥಾಯಿ ಸಮಿತಿಯು ನಗರದ ಹೋಟೆಲ್ಗಳಲ್ಲಿನ ಸ್ವಚ್ಚತೆ ಹಾಗೂ ನೈರ್ಮಲ್ಯದ ಬಗ್ಗೆ ತಪಾಸಣೆ ನಡೆಸಿದಾಗ, ಜಯನಗರದ ವಾಣಿಜ್ಯ ಸಂಕೀರ್ಣದಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಹೊರಭಾಗದಲ್ಲಿ ಟೇಬಲ್ ಹಾಕಿ ಅಲ್ಲಿಯೂ ಊಟ ತಿಂಡಿ ಸರಬರಾಜು ಮಾಡುತ್ತಿದ್ದುದನ್ನು ಗಮನಿಸಿ, ಶುಚಿತ್ವದ ದೃಷ್ಟಿಯಿಂದ ಆ ಹೋಟೆಲ್ನ ಪರವಾನಗಿ ನವೀಕರಿಸದಂತೆ ಸೂಚನೆ ನೀಡಲಾಗಿದೆ ಎಂದರು.
ಕೋಳಿ ಮಾಂಸದ ಜತೆ ದನದ ಮಾಂಸವನ್ನೂ ಬೆರೆಸಿ ಮಾರಾಟ ಮಾಡುತ್ತಿದ್ದ ಫ್ರೆಜರ್ಟೌನ್ನ ಫಿಜಾ ಡಿಲೈಟ್ ಎಂಬ ಅನಧಿಕೃತ ಹೋಟೆಲ್ ಮುಚ್ಚುವಂತೆ ಆದೇಶ ನೀಡಲಾಗಿದೆ ಎಂದೂ ಅವರು ತಿಳಿಸಿದರು. ನಗರದ ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಎಲ್ಲ ಹೋಟೆಲ್ಗಳಲ್ಲೂ ಶುಚಿತ್ವ ಕಾಪಾಡುವಂತೆ ಹಾಗೂ ಬಿಸಿನೀರನ್ನೇ ನೀಡುವಂತೆ ಸೂಚಿಸಲಾಗಿದೆ. ಆದೇಶ ಉಲ್ಲಂಘಿಸಿದರೆ, ನಿರ್ದಾಕ್ಷಿಣ್ಯವಾಗಿ ಹೋಟೆಲ್ಗಳ ಬಾಗಿಲು ಮುಚ್ಚಿಸಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದರು.