ವಾಜಪೇಯಿ ರಾಜೀನಾಮೆ ಕೊಡಲೇಬೇಕು - ಸೋನಿಯಾ
ಬೆಂಗಳೂರು : ರಾಷ್ಟ್ರೀಯ ಭದ್ರತೆಯ ವಿಷಯದಲ್ಲೇ ಭ್ರಷ್ಟತೆ ತೋರಿ, ಶತ್ರುಗಳಿಗೆ ಚಾಪೆ ಹಾಸಿ ಕೊಟ್ಟಿರುವ ಎನ್ಡಿಎ ಸರ್ಕಾರವನ್ನು ತಕ್ಷಣವೇ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಎಐಸಿಸಿ ಪೂರ್ಣಾಧಿವೇಶನದಲ್ಲಿ ನಡೆದ ಬಹಿರಂಗ ಸಭೆ ಆಗ್ರಹಿಸಿತು.
ಎಂಭತ್ತೊಂದನೆಯ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶವನ್ನು ಮಾರಿರುವ ಸರ್ಕಾರ ಅಧಿಕಾರದಲ್ಲಿರಲು ಅನರ್ಹ. ತಕ್ಷಣವೇ ಗದ್ದುಗೆಯಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು. ಜನಜಂಗುಳಿಯಿಂದ ಕಳೆಗಟ್ಟಿದ್ದ ಸಮಾರಂಭದ ತುಂಬೆಲ್ಲಾ ಪ್ರತಿಧ್ವನಿಸಿದ್ದು ರಕ್ಷಣಾ ಹಗರಣದ ಹಿನ್ನೆಲೆಯಲ್ಲಿ ಸರ್ಕಾರ ಕೆಳಗಿಳಿಯಲಿ ಎಂಬುದೇ. ಇದಕ್ಕೆ ಹೊರತುಪಡಿಸಿ, ಸೋನಿಯಾ ಗಾಂಧಿ ತಮ್ಮ ಪತಿಯ ಹತ್ಯೆಯನ್ನು ನೆನಪಿಸಿಕೊಂಡಾಗ ಗದ್ಗದಿತರಾದರು.
ಆಡುತ್ತಿದ್ದಂತೆ ಈಗ ನಡೆಯಲಿ : ತಮ್ಮ ಭಾಷಣದ ಶುರುವಿನಿಂದಲೇ ಪ್ರಧಾನಿ ವಾಜಪೇಯಿಯವರನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ, ಭ್ರಷ್ಟ ಪಕ್ಷಗಳನ್ನು ಒಕ್ಕೂಟದಲ್ಲಿ ಸೇರಿಸಿಕೊಂಡಿರುವ ವಾಜಪೇಯಿ ನೇತೃತ್ವದ ಸರ್ಕಾರ ಮಾಡಿರುವುದು ಅಕ್ಷಮ್ಯ ತಪ್ಪು. ತಾವು ವಿರೋಧ ಪಕ್ಷದ ಕುರ್ಚಿಯಲ್ಲಿ ಕೂತಿದ್ದಾಗ ನೈತಿಕ ಹೊಣೆಯ ಬಗೆಗಿನ ಮಾತಿನ ಕೊಂಬಿನಿಂದಲೇ ತಿವಿಯುತ್ತಿದ್ದ ವಾಜಪೇಯಿ ಈಗ ಅದನ್ನು ತಾವೂ ಪಾಲಿಸಬೇಕಾಗಿದೆ. ತಮ್ಮ ಭ್ರಷ್ಟ ಸಹವರ್ತಿ ಪಕ್ಷಗಳ ಒಕ್ಕೂಟದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ದೇಶವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಮಯಸಾಧಕ ಪಕ್ಷ ಬಿಜೆಪಿ : ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಿದ ಸೋನಿಯಾ, ಆಗಿನ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯ ಸಮಯವನ್ನು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಂಡದ್ದು ಬಿಜೆಪಿ. ಒಂದು ರೀತಿಯಲ್ಲಿ ರಾಜೀವ್ ಹಾಗೂ ಇಂದಿರಾಗಾಂಧಿ ಅವರನ್ನು ಅಮಾನುಷವಾಗಿ ಹತ್ಯೆಗಯ್ಯುವಂಥ ಪರಿಸ್ಥಿತಿಯನ್ನು ಹುಟ್ಟುಹಾಕಿದ್ದೇ ಈ ಪಕ್ಷ ಎಂದು ಬಿಜೆಪಿಯತ್ತ ಬೆಟ್ಟು ಮಾಡಿ ತೋರಿಸಿದರು.
ಸುಮಾರು 2 ಸಾವಿರ ಪೊಲೀಸರ ಬಿಗಿ ಪಹರೆಯಲ್ಲಿ ಪ್ರಾರಂಭವಾದ ಅಧಿವೇಶನದಲ್ಲಿ ಗುಜರಾತಿನ ಭೂಕಂಪಕ್ಕೆ ತುತ್ತಾದ ಸಾಹಸ್ರಾರು ಜನಕ್ಕೆ ಕಾಂಗ್ರೆಸ್ ಧುರೀಣರು ಸಂತಾಪ ಸೂಚಿಸಿದರು.
ಬೆಂಗಳೂರಿನಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಈ ಅಧಿವೇಶನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್, ಪಕ್ಷದ ಹಿರಿಯ ಧುರೀಣರಾದ ಮನ್ಮೋಹನ್ ಸಿಂಗ್, ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳು, ಬಾಲಿವುಡ್ ನಟ ಹಾಗೂ ರಾಜಕಾರಣಿ ಸುನಿಲ್ ದತ್, ಸ್ವಾ ದಳದ ರಾಷ್ಟ್ರೀಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...