ಕೈ ಕಚ್ಚಿದ ಕೃಷಿ, ಉತ್ತರ ಕರ್ನಾಟಕದ ಮತ್ತಿಬ್ಬರು ರೈತರ ಆತ್ಮಹತ್ಯೆ
ಹುಬ್ಬಳ್ಳಿ : ಸಾಲದ ಶೂಲದಿಂದ ಕಂಗೆಟ್ಟು ಧಾರವಾಡ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಕೃಷಿ ಕೈ ಕಚ್ಚಿ ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಯ ರೈತರ ಸಂಖ್ಯೆ 6 ಕ್ಕೇರಿದೆ.
ಶಿವಲಿಂಗಪ್ಪ ಬಂಟಾಳ್ (35) ಎನ್ನುವ ರೈತ ವಿಷ ಕುಡಿದು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಡವಾಗಿ ಬಂದಿರುವ ಪೊಲೀಸ್ ವರದಿಗಳು ತಿಳಿಸಿವೆ. ಮೂರು ವರ್ಷಗಳ ಹಿಂದೆ ಬ್ಯಾಂಕ್ನಿಂದ ಸಾಲ ಪಡೆದಿದ್ದ ಶಿವಲಿಂಗಪ್ಪ , ಸತತವಾಗಿ ಬೆಳೆ ಕೈ ಕೊಟ್ಟಿದ್ದರಿಂದ ಸಾಲ ಪಾವತಿಸಲು ವಿಫಲನಾಗಿದ್ದ . ಆಸ್ತಿ ಜಫ್ತಿ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ಶಿವಲಿಂಗಪ್ಪನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದಾಗಿ ಕಂಗೆಟ್ಟ ಶಿವಲಿಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಳ್ಳಾರಿಯ ದಮ್ಮೂರಿನಲ್ಲಿ ರೈತನ ಆತ್ಮಹತ್ಯೆ: ಮೆಕ್ಕೆ ಜೋಳ ಹಾಗೂ ಮೆಣಸಿನಕಾಯಿ ದರಗಳು ಮಾರುಕಟ್ಟೆಯಲಿ ತೀವ್ರ ಕುಸಿತ ಕಂಡಿದ್ದರಿಂದ ಬೇಸತ್ತ ಶೇಷರೆಡ್ಡಿ ಎನ್ನುವ ರೈತ (45) ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಳ್ಳಾರಿ ಪೊಲೀಸ್ ವರದಿಗಳು ತಿಳಿಸಿವೆ. ಶೇಷರೆಡ್ಡಿ ಕೂಡ ಕೋ ಆಪರೇಟಿವ್ ಸೊಸೈಟಿ ಹಾಗೂ ಬ್ಯಾಂಕ್ನಿಂದ ಸಾಲ ಪಡೆದಿದ್ದ.
(ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...